ಚಾಮರಾಜನಗರ: ಗ್ರಾಮ ಪಂಚಾಯ್ತಿ ಸದಸ್ಯನೋರ್ವ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮ ಪಂಚಾಯ್ತಿ ಸದಸ್ಯ ಹೊಸ ಹಂಪಾಪುರ ಗ್ರಾಮದ ನಾಗರಾಜು ಅಲಿಯಾಸ್ ನಾಗಟ್ಟಿ ರಾಜೀನಾಮೆ ನೀಡಿದ ಸದಸ್ಯ. ಜೂನ್.25 ರಂದು ಗ್ರಾಮ ಪಂಚಾಯ್ತಿಯಲ್ಲಿ ವಿಚಾರವೊಂದರ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಬಗ್ಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸನಿಹದಲ್ಲಿದ್ದ ಕೆಲವರು ಈ ಮಾತನ್ನು ಕೇಳಿಸಿಕೊಂಡಿದ್ದು, ಹಳೇ ಹಂಪಾಪುರ ಗ್ರಾಮಸ್ಥರಿಗೆ ಈ ವಿಚಾರ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಯುವಕರ ಗುಂಪೊಂದು ನಾಗರಾಜು ಅವರನ್ನು ಪ್ರಶ್ನಿಸಲು ಮುಂದಾಗಿದ್ದು ಸಂಪರ್ಕಕಕ್ಕೆ ಆತ ಸಿಕ್ಕಿರಲಿಲ್ಲ.
ಈ ಬಗ್ಗೆ ದಲಿತ ಮುಂಖಡರು ಪಂಚಾಯ್ತಿ ಮಾಡಲು ಸೇರಿದ್ದು ನಾಗರಾಜು ಸಭೆಗೆ ಹಾಜರಾಗಿಲ್ಲ. ಬಳಿಕ ಅದೇ ರೀತಿ ಕರೆಯಲಾಗಿದ್ದ ಮತ್ತೊಂದು ಸಭೆಗೆ ಬಂದ ನಾಗರಾಜು ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅದಕ್ಕೊಪ್ಪದ ದಲಿತ ಮುಖಂಡರು ಅಂಬೇಡ್ಕರ್ ಅವರನ್ನು ನಿಂದಿಸಿರುವುದು ನಮಗೆ ತಿಳಿದಿದೆ. ಆದ್ದರಿಂದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡಬೇಕೆಂದು ಸೂಚಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಸಿಡಿ ತನಿಖೆಯ ಎಸ್ಐಟಿ ಮುಖ್ಯಸ್ಥರ ರಜೆ ಅವಧಿ ಮತ್ತೆ ವಿಸ್ತರಣೆ
ಪರಿಣಾಮ ಜೂ.28 ರಂದು ನಾಗರಾಜು ತಮ್ಮ ರಾಜೀನಾಮೆ ಪ್ರತಿಯನ್ನು ಉಪವಿಭಾಗಧಿಕಾರಿ, ತಾಲೂಕು ಪಂಚಾಯ್ತಿಯ ಇಒ ಸೇರಿದಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ನೀಡಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜು ಪೂಜೆ ಸಲ್ಲಿಸಿದ್ದಾರೆ.