ಬೆಂಗಳೂರು: ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಉತ್ತಮ ಜನಸ್ಪಂದನೆ ವ್ಯಕ್ತವಾಗುತ್ತಿದೆ. ವೈದ್ಯನಾಗಬೇಕು, ಬಡವರ ಸೇವೆ ಮಾಡಬೇಕು ಎಂದು ಅದಮ್ಯ ಕನಸು ಕಂಡಿದ್ದ ಬೆಂಗಳೂರು ಬಸವೇಶ್ವರ ನಗರದ ಡಾ.ಸಂದೀಪ್ 30ನೇ ವರ್ಷಕ್ಕೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಮಗನ ಹೆಸರಿನಲ್ಲಿ ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ 20 ಟ್ಯಾಬ್ಗಳನ್ನು ದಾನವಾಗಿ ನೀಡಿದ ವೈದ್ಯರ ಅಪ್ಪ-ಅಮ್ಮ ಮಗನನ್ನು ಸ್ಮರಿಸಿಕೊಂಡಿದ್ದಾರೆ.
ಮನೆಯ ಬೆಳಕಾಗಬೇಕಿದ್ದ ಮಗನ ಅಗಲಿಕೆಯ ಶಾಶ್ವತ ನೋವಿನಲ್ಲೂ ಮಗನ ಸಮಾಜಸೇವೆಯ ಇಚ್ಛೆ ಈಡೇರಿಸಲು ಬೆಂಗಳೂರು ಬಸವೇಶ್ವರ ನಗರದ ಹನುಮಾನ್ ಮತ್ತು ಶಾರದಮ್ಮ ಬಡಮಕ್ಕಳಿಗೆ ಜ್ಞಾನದ ಹಸಿವು ನೀಗಿಸುವ ಅದ್ಭುತ ಕಾರ್ಯಕ್ರಮ ಪಬ್ಲಿಕ್ ಟಿವಿಯ ‘ಜ್ಞಾನದೀವಿಗೆ’ಯನ್ನು ಆಯ್ದುಕೊಂಡಿದ್ದಾರೆ.
ಶಾಲಾ ಮಕ್ಕಳ ಕಲಿಕೆಗೆ ನಮ್ಮ ಮಗನ ನೆನಪಿನಲ್ಲಿ ಏನಾದ್ರೂ ಮಾಡಬೇಕು ಎಂದು ಜ್ಞಾನ ದೀವಿಗೆ ಕಾರ್ಯಕ್ರಮ ನೋಡಿದಾಗ ಅನಿಸಿತ್ತು. ನನ್ನ ಆಸ್ತಿಯಾಗಿದ್ದ ಮಗನಂತೂ ನನ್ನ ಬಿಟ್ಟು ಹೋಗಿದ್ದಾನೆ. ಈಗ ಈ ಮಕ್ಕಳಿಗೆ ನನ್ನ ಮಗನ ಹೆಸರಿನಲ್ಲಿ 20 ಟ್ಯಾಬ್ ನೀಡುತ್ತೇನೆ ಎಂದು ಡಾ.ಸಂದೀಪ್ ತಂದೆ-ತಾಯಿ ಹನುಮಾನ್ ಮತ್ತು ಶಾರದಮ್ಮ ಭಾವುಕರಾಗಿ ಚೆಕ್ ವಿತರಿಸಿದರು.