– ಕಿಲಾಡಿ ಜೋಡಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಟ್ರಯಲ್ ನೋಡುತ್ತೇನೆ ಎಂದು 40 ಗ್ರಾಮ್ನ ಚಿನ್ನದ ಸರವನ್ನು ಕೊರಳಿಗೆ ಹಾಕಿಕೊಂಡು ನಂತರ ಗೆಳೆಯ ಜೊತೆ ಯುವತಿಯೊಬ್ಬಳು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಮುರುಗೇಶ್ ಪಾಳ್ಯದ ನವರತ್ನ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ.
ಚಿನ್ನ ಖರೀದಿಸುವ ನೆಪದಲ್ಲಿ ಜೋಡಿಯೊಂದು ನವರತ್ನ ಜ್ಯುವೆಲ್ಲರ್ಸ್ ಗೆ ಬಂದಿದೆ. ಈ ವೇಳೆ ಸರವನ್ನು ಟ್ರಯಲ್ ನೋಡುತ್ತೇವೆ ಎಂದು ಯುವತಿ ಕೊರಳಿಗೆ ಹಾಕಿಕೊಂಡಿದ್ದಾಳೆ. ನಂತರ ಎಟಿಎಂ ಕಾರ್ಡ್ ಪಡೆದುಕೊಳ್ಳುವ ನೆಪದಲ್ಲಿ ಅಂಗಡಿಯಿಂದ ಹೊರ ಬಂದು ಗೆಳೆಯನ ಜೊತೆ ಎಸ್ಕೇಪ್ ಆಗಿದ್ದಾಳೆ. ಈ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊದಲು ಯುವತಿ ಮತ್ತು ಯುವಕ ಬಂದು ಸರ ಕೇಳಿದ್ದಾರೆ. ಈ ವೇಳೆ ಯುವಕ ಎಟಿಎಂ ಕಾರ್ಡ್ ತೆಗೆದುಕೊಂಡು ಬರುತ್ತೇನೆ ಎಂದು ತನ್ನ ಸ್ಕೂಟಿಯ ಬಳಿ ಹೋಗಿದ್ದಾನೆ. ನಂತರ ಯುವತಿ ಸರವನ್ನು ತೆಗೆದುಕೊಂಡು ಕೊರಳಿಗೆ ಹಾಕಿಕೊಂಡಿದ್ದಾಳೆ. ಈ ವೇಳೆ ಸ್ಕೂಟಿಯಲ್ಲಿ ಎಟಿಎಂ ಕಾರ್ಡ್ ಹಿಡಿದುಕೊಂಡು ಬಂದ ಯುವಕ, ಯುವತಿಯನ್ನು ಹೊರಗೆ ಕರೆದಿದ್ದಾನೆ. ಸರವನ್ನು ಧರಿಸಿದ ಯುವತಿ ಕಾರ್ಡ್ ಪಡೆಯುವ ನೆಪದಲ್ಲಿ ಹೊರಗೆ ಬಂದು ಬೈಕ್ ಏರಿ ಇಬ್ಬರು ಎಸ್ಕೇಪ್ ಆಗಿದ್ದಾರೆ.
ಇತ್ತ ಕಣ್ಣಮುಂದೆಯೇ ತನ್ನ ಚಿನ್ನವನ್ನು ಕಳೆದುಕೊಂಡ ಅಂಗಡಿ ಮಾಲೀಕ ಹಿಂದೆ ಓಡಿ ಹೋದರು ಪ್ರಯೋಜವಾಗಲ್ಲ. ನಂತರ ಅಂಗಡಿಯ ಮಾಲೀಕ ಜೀವನ್ ಭೀಮಾನಗರ ಠಾಣೆಗೆ ದೂರು ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ರಾಘವೇಂದ್ರ ಬಂಧಿಸಿದ್ದಾರೆ. ಯುವತಿ ಪರಾರಿಯಾಗಿದ್ದು, ಆಕೆಯ ಬಂಧನಕ್ಕೆ ಬಲೆ ಬೀಸಿದ್ದಾರೆ.