ಚಿಕ್ಕಬಳ್ಳಾಪುರ: ಚಾಕುವಿನಿಂದ ಇರಿದು ಪ್ರಿಯತಮೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ಭಗತ್ ಸಿಂಗ್ ನಗರದಲ್ಲಿ ನಡೆದಿದೆ.
ಭಗತ್ ಸಿಂಗ್ ನಗರದಲ್ಲಿ ಘಟನೆ ನಡೆದಿದ್ದು, ಆರೋಪಿ ಹೇಮಂತ್ ತನ್ನ ಪ್ರಿಯತಮೆ ಸಂಗೀತಾ(22)ಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಸಂಗೀತಾ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಚಿಂತಾಮಣಿ ಮೂಲದವರಾದ ಸಂಗೀತಾ, ಭಗತ್ ಸಿಂಗ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಡರಾತ್ರಿ ಹೊಂಚು ಹಾಕಿ ಮನೆಗೆ ನುಗ್ಗಿದ ಹೇಮಂತ್, ಸಂಗೀತಾ ಹೊಟ್ಟೆ, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ಹೇಮಂತ್ ನನ್ನು ಬಂಧಿಸಿ ಕರೆತಂದಿದ್ದಾರೆ.
ಮದುವೆಯಾಗಿ ಮಗುವಾದ ನಂತರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನ ಜೊತೆ ವಿಚ್ಛೇದನ ಪಡೆದಿದ್ದ ಸಂಗೀತಾ, ಮಗು ಹಾಗೂ ತಂದೆ ತಾಯಿಯೊಂದಿಗೆ ನಗರದಲ್ಲಿ ನೆಲೆಸಿದ್ದರು. ಈ ವೇಳೆ ಹೇಮಂತ್ ಜೊತೆ ಸಂಬಂಧ ಬೆಳೆಸಿ, 2 ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಆದರೆ ಕಳೆದ 3-4 ತಿಂಗಳ ಹಿಂದೆ ಸಂಗೀತಾ ವರ್ತನೆಯಿಂದ ಆಕೆ ಮೇಲೆ ಅನುಮಾನಪಟ್ಟು, ಹೇಮಂತ್ ಜಗಳ ಮಾಡುತ್ತಿದ್ದ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಹೇಮಂತ್ ತನ್ನ ಸಹವಾಸಕ್ಕೆ ಬರಬಾರದು ಎಂದು ಸಂಗೀತಾ ಮುಚ್ಚಳಿಕೆ ಬರೆಸಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಹೇಮಂತ್, ಕುಡಿದ ಅಮಲಿನಲ್ಲಿ ಸಂಗೀತಾ ತಂದೆಯ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಪೊಲೀಸರು ಹೇಮಂತ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ 4 ದಿನಗಳ ಹಿಂದೆ ಜೈಲಿನಿಂದ ಹೊರ ಬಂದ ಹೇಮಂತ್, ಸಂಗೀತಾ ವಾಸವಿದ್ದ ಮನೆ ಹುಡುಕಾಟ ನಡೆಸಿ ಮನೆಗೆ ಹೋಗಿದ್ದಾನೆ.
ಮನೆಯಲ್ಲಿ ಬೇರೆ ಯುವಕ ಇದ್ದಿದ್ದನ್ನು ಕಂಡು ಇಬ್ಬರ ನಡುವೆ ಜಗಳ ಆಗಿದೆ. ಈ ವೇಳೆ ಹೇಮಂತ್ ಮೇಲೆ ಹಲ್ಲೆ ನಡೆಸಿ ಹೊರ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹೇಮಂತ್, ತಡರಾತ್ರಿ ಹೊಂಚು ಹಾಕಿ ಮನೆಗೆ ನುಗ್ಗಿದ ಹೇಮಂತ್, ಸಂಗೀತಾ ಹೊಟ್ಟೆ, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಇದೀಗ ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.