ಜೂನ್ 21ರಂದು ಬೆಳಗ್ಗೆ 9ರಿಂದ ಸಂಜೆ 4ವರೆಗೆ ಮಂಜುನಾಥನ ದರ್ಶನವಿಲ್ಲ

Public TV
1 Min Read
dharmasthala

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜೂನ್ 21ರ ಭಾನುವಾರದಂದು ಮಂಜುನಾಥ ಸ್ವಾಮಿಯ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ.

ಭಾನುವಾರ ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ದರ್ಶನ ಸಮಯ ಬದಲು ಮಾಡಲಾಗಿದ್ದು, ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮಂಜುನಾಥ ಸ್ವಾಮಿ ದರ್ಶನ ಇಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಬೆಳಗ್ಗೆ 5.30ಯಿಂದ 9 ಗಂಟೆಯವರಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಂತರ ಸಂಜೆ 4ರಿಂದ ರಾತ್ರಿ 9ರವರೆಗೆ ದರ್ಶನಕ್ಕೆ ಅವಕಾಶ ಕೊಡಲಾಗಿದೆ ಎಂದು ಪ್ರಕರಣೆಯಲ್ಲಿ ತಿಳಿಸಿದೆ.

ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಲಾಕ್ ಆಗಿದ್ದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಜೂನ್ 8ರಿಂದ ಓಪನ್ ಆಗಿದೆ. ಸಾವಿರಾರು ಭಕ್ತರು ಮುಡಿಕೇಂದ್ರದಲ್ಲಿ ಮುಡಿಕೊಟ್ಟು, ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ. ಕ್ಷೇತ್ರದ ಸಿಬ್ಬಂದಿ ಮತ್ತು ಅರ್ಚಕರು ದೇವಸ್ಥಾನ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜೇಷನ್, ಮಾಸ್ಕ್, ಗ್ಲೌಸ್ ಮತ್ತು ಫೇಸ್ ಶೀಲ್ಡ್ ಕಡ್ಡಾಯ ಮಾಡಲಾಗಿದೆ.

ಧರ್ಮಸ್ಥಳದಲ್ಲಿ ದರ್ಶನದ ಜೊತೆ ಅನ್ನಸಂತರ್ಪಣೆಯೂ ಆರಂಭವಾಗಿದೆ. ಅನ್ನಪೂರ್ಣ ಅನ್ನಛತ್ರದಲ್ಲಿ ಅನ್ನದಾನ ನಡೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೂತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಎರಡು ಹೊತ್ತು ಅನ್ನದಾನ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *