ಜಿಲ್ಲಾ, ತಾಲೂಕು, ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ: ಆರ್.ಅಶೋಕ್

Public TV
3 Min Read
R ASHOK 2

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆದ್ದೇ ಗೆಲ್ಲಬೇಕಿದೆ. ಇದಕ್ಕಾಗಿ ಯುವ ಮೋರ್ಚಾವು ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ರಾಜ್ಯದ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಕರೆನೀಡಿದ್ದಾರೆ.

E6jyCDVUUAAqdMQ

ನಗರದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಇಂದು ನಡೆದ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆರ್. ಅಶೋಕ್ ಅವರು, ಚುನಾವಣೆಯ ಪರೀಕ್ಷೆಯಲ್ಲಿ ಗೆದ್ದು ನಿಮ್ಮ ನಾಯಕತ್ವವನ್ನು ದೃಢಪಡಿಸಿಕೊಳ್ಳಿ. ಬಿಜೆಪಿಯನ್ನು ಈಗ ಪ್ರಪಂಚವೇ ದೊಡ್ಡ ಪಕ್ಷವಾಗಿ ಗುರುತಿಸುತ್ತಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಪ್ರಧಾನಿಯವರು 18 ರಿಂದ 20 ಗಂಟೆ ಕೆಲಸ ಮಾಡುತ್ತಾರೆ. ಕೋವಿಡ್ ನಿಂದ ಹೊರಬರಲು ನರೇಂದ್ರ ಮೋದಿ ಅವರ ಶ್ರಮವೂ ಕಾರಣವಾಗುತ್ತಿದೆ. ಅಯೋಧ್ಯೆ, ಕಾಶ್ಮೀರದ ವಿಚಾರ, ಭಯೋತ್ಪಾದನೆ ಮೊದಲಾದ ವಿಚಾರಗಳಲ್ಲಿ ದಿಟ್ಟ ನಿರ್ಧಾರವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ಅಂಥ ಚಮತ್ಕಾರವನ್ನು ಬಿಜೆಪಿ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯವರೇ 56 ಇಂಚಿನ ಎದೆ ಇದ್ದರೆ ಸಾಲದು: ಸಿದ್ದರಾಮಯ್ಯ

ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಆಡ್ವಾಣಿ ಅವರ ದೂರದೃಷ್ಟಿಯ ಯೋಜನೆಗಳಿಂದ ಪಕ್ಷ ಬಲಿಷ್ಠವಾಗಿದೆ. ನಮ್ಮ ಸರ್ಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಎಲ್ಲಾ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಜೊತೆಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಬಿಜೆಪಿ ಈ ದೇಶಕ್ಕೆ ಅನಿವಾರ್ಯ. ಮತಬ್ಯಾಂಕ್ ಗಾಗಿ ದೇಶವನ್ನು ಬಲಿ ಕೊಡುವ ಪರಿಸ್ಥಿತಿ ಬರದಂತೆ ಕೆಲಸ ಮಾಡಬೇಕು. ನಾನೂ ಇಲ್ಲಿಂದಲೇ ಬಂದವನು. ಅದಕ್ಕೇ ನನಗೆ ಯುವ ಮೋರ್ಚಾ ವೇದಿಕೆ ಅತ್ಯಂತ ಇಷ್ಟವಾದುದು. ಕಾವೇರಿ ನದಿಯ ಮಾದರಿಯಲ್ಲಿ ಬಿಜೆಪಿ ಹರಿಯುವ ನದಿ. ಆ ಹರಿಯುವ ನದಿಗೆ ಯುವ ಮೋರ್ಚಾ ಒಂದು ಕವಲಾಗಿ ಸೇರುತ್ತದೆ. ದೊಡ್ಡ ನದಿ ಸೇರುವ ದೊಡ್ಡ ತೊರೆ ಇದಾಗಿದೆ. ಯು ಮೋರ್ಚಾ ಸಂಘಟನೆಯಿಂದ ಬಂದವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತದೆ. ನಾನು ಕೂಡ ತುರ್ತು ಪರಿಸ್ಥಿತಿ ಜೈಲಿಗೆ ಹೋಗಿ ಬಂದ ಬಳಿಕ ಒಂದು ವರ್ಷ ಅಜ್ಞಾತವಾಸದಲ್ಲಿದ್ದೆ. ನಾನು ಪೆಟ್ರೋಲ್ ಬಂಕ್ ನಲ್ಲಿ ಸ್ಕೂಟರ್ ಗೆ ಪೆಟ್ರೋಲ್ ಹಾಕಿಸ್ತಾ ಇದ್ದೆ. ಅಲ್ಲಿಂದ ಕರೆದುಕೊಂಡು ಹೋಗಿ ದೊಡ್ಡಬಳ್ಳಾಪುರದಲ್ಲಿ ಯುವ ಮೋರ್ಚಾ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದರು. ಅಲ್ಲಿಂದ ಬೆಳೆದು ಈಗ ಸಚಿವನಾಗಿ ನಿಮ್ಮೆದುರು ನಿಂತಿದ್ದೇನೆ ಎಂದು ವಿವರಿಸಿದರು.

R ASHOK

ಯುವ ಮೋರ್ಚಾ ಛಾಪು ಬೆಳೆಸಲು ಮುಂದಾಗಿ. ಸಿಂಹಕ್ಕೆ ಯಾರೂ ಪಟ್ಟಾಭಿಷೇಕ ಮಾಡುವುದಿಲ್ಲ. ಹೋರಾಟದ ಮೂಲಕ ಗುರುತಿಸಿಕೊಂಡರೆ ಯುವ ಮೋರ್ಚಾಗೆ ಶಕ್ತಿ ಬರುತ್ತದೆ. ಯುವ ಮೋರ್ಚಾಗೆ ಮಾರ್ಗದರ್ಶನ ಮಾಡುವ ನಾಯಕರಿಗೆ ಕೊರತೆ ಇಲ್ಲ. ನಿಮ್ಮ ವೈಯಕ್ತಿಕ ನಾಯಕತ್ವವನ್ನು ಬೆಳೆಸುವ ಕೆಲಸವನ್ನು ನೀವೇ ಮಾಡಬೇಕು ಎಂದು ನುಡಿದರು.

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರೂ ಆದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಯುವ ಮೋರ್ಚಾವು ನಿರಂತರವಾಗಿ ಅನೇಕ ನಾಯಕರನ್ನು ಪಕ್ಷಕ್ಕೆ ನೀಡಿದೆ. ಅದನ್ನು ಸ್ಫೂರ್ತಿಯ ವಿಷಯವನ್ನಾಗಿ ಯುವ ಮೋರ್ಚಾದ ಪದಾಧಿಕಾರಿಗಳು ಮಾಡಿಕೊಂಡು ಬೆಳೆಯಬೇಕು. ಯುವ ಮೋರ್ಚಾವು ಮಾದರಿ ಸಂಘಟನೆ. ಅದು ಎಲ್ಲ ರೀತಿಯ ಯುವಕರನ್ನು ಪ್ರತಿನಿಧಿಸುವ ಸಂಘಟನೆಯಾಗಿ ಬೆಳೆಯಬೇಕು. ಯುವ ಮೋರ್ಚಾವು ರಾಜಕೀಯದಲ್ಲಿ ಹೊಸ ಪ್ರಯತ್ನ ಅಳವಡಿಸಿಕೊಳ್ಳುವಂತಾಗಬೇಕು. ಮೂಲ ತತ್ವ, ಸಿದ್ಧಾಂತಗಳಲ್ಲಿ ಸ್ಥಿರತೆ ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಬದಲಾವಣೆ ನಮ್ಮದಾಗಿರಬೇಕು ಎಂದು ಅಭಿಪ್ರಾಯಪಟ್ಟರು.

R ASHOK 4

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟರು. ಕೊರೊನಾ ಎರಡು ಅಲೆಗಳು ಬಂದು ಹೋಗಿವೆ. ಮೂರನೇ ಅಲೆ ಬರುವಂತಿದೆ. ಆದರೂ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಸಿಕ್ಕಿಲ್ಲ. ರಾಜ್ಯದ ಯುವ ಕಾಂಗ್ರೆಸ್‍ನಲ್ಲೂ ಸಮಸ್ಯೆ ಮುಂದುವರಿದಿದೆ. ಗೆದ್ದವರು ಒಬ್ಬರು, ಇನ್ನೊಬ್ಬರಿಗೆ ಅಧ್ಯಕ್ಷತೆ, ಅದರಲ್ಲೂ ಗುಂಪುಗಾರಿಕೆ, ಹೊಡೆದಾಟ ಮುಂದುವರಿದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವಿಚಾರ – ಒಂದು ವಾರ ಕಾಯಿರಿ: ಡಿಕೆಶಿ

ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ.ಸಂದೀಪ್ ಕುಮಾರ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ನಮ್ಮದೇ ಸರ್ಕಾರವಿದೆ. ಯುವ ಮೋರ್ಚಾವು ಸಮಾಜದ ನೊಂದವರ ತೊಂದರೆಗೆ ಒಳಗಾದವರಿಗೆ ನೇರವಾಗಿ ಹೋರಾಟಕ್ಕೂ ಸೈ, ಸೇವೆಗೂ ಸೈ ಎಂದು ಸಾಬೀತುಪಡಿಸಿದೆ. ಯುವ ಮೋರ್ಚಾ ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಮತ್ತು ಆಹ್ವಾನಿತ ಪದಾಧಿಕಾರಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *