ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಯಲವಾಳ ಗ್ರಾಮದ ತಮ್ಮ ಜಮೀನಿನಲ್ಲಿ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ನಡೆಸಿದರು.
ಜಮೀನಿನಲ್ಲಿ ನಿಂತು ಬೆಳೆ ವಿವರ ಸರ್ವೆ ನಂಬರ್ ಸೇರಿದಂತೆ ಜಮೀನಿನಲ್ಲಿನ ತಮ್ಮ ಭಾವಚಿತ್ರವನ್ನು ಆ್ಯಪ್ನಲ್ಲಿ ಅಪ್ಲೋಡ್ ಮಾಡಿ ರೈತರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತನ ಬೆಳೆ ರೈತನ ಹಕ್ಕಾಗಿದೆ. ಇದೇ ದೇಶದಲ್ಲಿ ಮೊದಲ ಬಾರಿಗೆ ರೈತನೇ ಸ್ವತಃ ತನ್ನ ಹೊಲದ ಸಮೀಕ್ಷೆ ನಡೆಸಿ ತಾನೇ ಪ್ರಮಾಣಪತ್ರ ನೀಡುವಂತಹ ಮಹತ್ವದ ಆ್ಯಪ್ ಇದಾಗಿದ್ದು, ರೈತರು ಆ್ಯಪ್ ಸಮೀಕ್ಷೆ ಬಗ್ಗೆ ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ. ಈ ಬಾರಿಯ ರೈತ ಬೆಳೆ ಸಮೀಕ್ಷೆ ರೈತರ ಬೆಳೆಯ ಉತ್ಸವವೇ ಆಗಿದೆ ಎಂದರು.
ಸಮೀಕ್ಷೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆ ಕಂಡು ಆಗಸ್ಟ್ 24 ರವರೆಗೆ ನಿಗದಿಗೊಳಿಸಲಾಗಿದ್ದ ರೈತ ಬೆಳೆ ಆ್ಯಪ್ ಸಮೀಕ್ಷೆಯ ಅವಧಿಯನ್ನು ಇನ್ನು ಸ್ವಲ್ಪದಿನಗಳ ಕಾಲ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರವು ಸಹ ರಾಜ್ಯದ ಈ ಕ್ರಾಂತಿಕಾರಕ ಹಾಗೂ ರೈತೋಪಯೋಗಿ ಆ್ಯಪ್ ಸಮೀಕ್ಷೆಯಿಂದ ಪ್ರೇರಿತಗೊಂಡಿದ್ದು, ದೇಶದ ಇತರೇ ಜಿಲ್ಲೆಗಳಲ್ಲಿಯೂ ಸಹ ಜಾರಿಗೊಳಿಸಲು ಮುಂದಾಗಿದೆ ಎಂದರು.
Farmers Crop Survey App 2020-21 ಹೆಸರಿನಲ್ಲಿ ಈ ಆ್ಯಪ್ ಬಿಡುಗಡೆಯಾಗಿದೆ. ಕರ್ನಾಟಕ ಸರ್ಕಾರ ಅಭಿವೃದ್ಧಿ ಪಡಿಸಿರುವ ಈ ಅಪ್ಲಿಕೇಶನ್ ಅನ್ನು ಇಲ್ಲಿಯವರೆಗೆ 50 ಸಾವಿರ ಮಂದಿ ಡೌನ್ಲೋಡ್ ಮಾಡಿದ್ದಾರೆ. 62 ಎಂಬಿ ಗಾತ್ರದ ಈ ಅಪ್ಲಿಕೇಶನ್ ಆಂಡ್ರಾಯ್ಡ್ 5.0 ಲಾಲಿಪಾಪ್ ಸೇರಿದಂತೆ ನಂತರ ಓಎಸ್ ಇರುವ ಫೋನ್ಗಳಿಗೆ ಸಪೋರ್ಟ್ ಮಾಡುತ್ತದೆ.
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ – ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್