ಹುಬ್ಬಳ್ಳಿ: ಎತ್ತುಗಳಿಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳ ಕೈಯಲ್ಲಿ ಕುಂಟೆ ಎಳೆಸಿದ್ದ ರೈತನಿಗೆ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್ಸಿ ನಾಗರಾಜ್ ಛಬ್ಬಿ ಎತ್ತುಗಳನ್ನು ಕೊಡುಗೆ ನೀಡುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ಗೆ ರೈಲ್ವೇ ಕಲೆಕ್ಟರ್ ಆಯ್ಕೆ
ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಕಲ್ಲಪ್ಪ ಜಾವೂರ ಎಂಬುವರಿಗೆ ಎತ್ತುಗಳನ್ನು ಸಿದ್ದಾರೂಢ ಮಠದ ಆವರಣದಲ್ಲಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎತ್ತುಗಳು ಇಲ್ಲದ್ದಕ್ಕೆ ಕಲ್ಲಪ್ಪ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಗಲ ಮೇಲೆ ಕುಂಟೆ ಹಾಕಿ ಹೊಲವನ್ನು ಹರಗಿ ಜಮೀನು ಹದಗೊಳಿಸುವ ದೃಶ್ಯ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ನನ್ನ ಗಮನಕ್ಕೆ ಬಂದಿತು. ಕೃಷಿಕನಿಗೆ ಎತ್ತುಗಳನ್ನು ಕೊಡಿಸಬೇಕೆಂದು ನಿರ್ಧಾರ ಮಾಡಿ ಕಾರ್ಯಕರ್ತರ ಮೂಲಕ ಕಲ್ಲಪ್ಪನಿಗೆ ತಿಳಿಸಲಾಯಿತು. ಅದಕ್ಕೆ ಅವರ ಕುಟುಂಬದವರು ಸಹಮತ ವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ ಸಿದ್ದಾರೂಢರ ಸನ್ನಿದಾನದಲ್ಲಿ ಎತ್ತುಗಳನ್ನು ಕೊಡಬೇಕೆಂದು ಸಂಕಲ್ಪ ಮಾಡಿಕೊಳ್ಳಲಾಗಿತ್ತು. ಅದರಂತೆ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಅವರ ಮೂಲಕ ರೈತನಿಗೆ ಎತ್ತುಗಳನ್ನ ಕೊಡುಗೆ ನೀಡಲಾಗಿದೆ ಎಂದು ಮಾಜಿ ಶಾಸಕ ನಾಗರಾಜ್ ಛಬ್ಬಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ಅನಿಲ ಪಾಟೀಲ್, ಅಲ್ತಾಫ ಹಳ್ಳೂರ, ನಾಗರಾಜ ಗೌರಿ, ದೀಪಾ ಗೌರಿ, ಕಿರಣ ಪಾಟೀಲ್, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಹಲವರು ಇದ್ದರು.