ಕಾರವಾರ: ಬಹುತೇಕ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಜಿಲ್ಲೆ ಉತ್ತರ ಕನ್ನಡ. ರಾಜ್ಯದಲ್ಲೇ ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲಿದೆ. ಸಾವಿನ ಪ್ರಮಾಣ ಕೂಡ ಹೆಚ್ಚಿದೆ. ಹೀಗಿರುವಾಗ ಜನರ ಜೀವ ಉಳಿಸಲು ಇದೀಗ ಆಕ್ಸಿ ಬಸ್ ಗಳು ರಸ್ತೆಗಳಿದಿವೆ. ಈ ಆಕ್ಸಿ ಬಸ್ ಏನು, ಅದು ಹೇಗೆ ಕೆಲಸ ಮಾಡುತ್ತೆ ಅನ್ನೋ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದೆ. ಹೀಗಿರುವಾಗ ಆಸ್ಪತ್ರೆಗೆ ಬರುವ ಕೊರೊನಾ ರೋಗಿಗಳಿಗೆ ತುರ್ತು ಸ್ಥಳದಲ್ಲೇ ಆಕ್ಸಿಜನ್ ವ್ಯವಸ್ಥೆ ಮಾಡುವ ವಾಹನವೇ ಆಕ್ಸಿ ಬಸ್. ಇದೀಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಸಲು ನಾಲ್ಕು ವಿಶೇಷ ‘ಆಕ್ಸಿ ಬಸ್’ಗಳು ಜಿಲ್ಲೆಗೆ ಇಂದು ಆಗಮಿಸಿದೆ.
ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಈ ಬಸ್ಗಳನ್ನು ನೀಡಿದ್ದು, ರಾಜ್ಯ ಸರ್ಕಾರದೊಂದಿಗೆ ಸಮನ್ವಯದಲ್ಲಿ ಬಳಕೆಯಾಗಲಿವೆ. ಬೆಂಗಳೂರಿನ ‘ಇಂಡಿ ವಿಲೇಜ್’ ಎಂಬ ಸಂಸ್ಥೆಯೊಂದು ಬಸ್ ಗಳನ್ನು ನೀಡಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಒಳಗೊಂಡಿವೆ. ಸೋಂಕಿತರು ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳು ಸಿಗದೆ ಸಮಸ್ಯೆಯಾಗಿದೆ. ಹಾಸಿಗೆ ಸಿಗುವ ತನಕ ಸೋಂಕಿತರು ವೈದ್ಯಕೀಯ ಆಮ್ಲಜನಕದ ಸಹಾಯದಲ್ಲಿ ಇರಲು ಈ ಬಸ್ಗಳು ಬಳಕೆಯಾಗುತ್ತವೆ.
ಈ ಬಗ್ಗೆ ಪಬ್ಲಿಕ್ ಟಿ.ವಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಮ್ಮ ಜಿಲ್ಲೆಯಲ್ಲಿ ಈವರೆಗೆ ಹಾಸಿಗೆಯ ಕೊರತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಇರುವ ಬಸ್ಗಳನ್ನು ಸರ್ಕಾರ ಕಳುಹಿಸಿಕೊಟ್ಟಿದೆ ಎಂದರು.
ಬಸ್ಸಿನಲ್ಲಿರುವ ಸಲಕರಣೆಗಳ ಮೂಲಕ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು 95ಕ್ಕೆ ಏರಿಸಲು ಸಾಧ್ಯವಿದೆ. ಕಾರವಾರ, ಹೊನ್ನಾವರ, ಶಿರಸಿ ಮತ್ತು ದಾಂಡೇಲಿಯಲ್ಲಿ ಈ ಬಸ್ಗಳನ್ನು ನಿಲುಗಡೆ ಮಾಡಲಾಗುವುದು. ಅಲ್ಲಿಂದಲೇ ಅಗತ್ಯವಿರುವ ಕಡೆಗೆ ಕಳುಹಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.