ಚೀನಾ ಸರ್ಕಾರ ಹೇಳದೇ ಇದ್ರೂ ಸಾವು ಸಂಭವಿಸಿದ್ದನ್ನು ಒಪ್ಪಿಕೊಂಡ ಗ್ಲೋಬಲ್‌ ಟೈಮ್ಸ್‌ ಸಂಪಾದಕ

Public TV
2 Min Read
india china 1

ಬೀಜಿಂಗ್‌: ತಂಟೆಕೋರ ಚೀನಾ ಇಲ್ಲಿಯವರೆಗೆ ಸಾವು ನೋವಿನ ಬಗ್ಗೆ ಅಧಿಕೃತವಾಗಿ ಸುದ್ದಿ ಪ್ರಕಟಿಸದೇ ಇದ್ದರೂ ಚೀನಾದ ಸರ್ಕಾರದ ಮುಖವಾಣಿ ಇಂಗ್ಲಿಷ್ ಗ್ಲೋಬಲ್‌ ಟೈಮ್ಸ್‌ ‌ ಸಂಪಾದಕ ಸಾವು ಸಂಭವಿಸಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಗ್ಲೋಬಲ್‌ ಟೈಮ್ಸ್‌ ಸಂಪಾದಕ ಹು ಕ್ಸಿಜಿನ್‌ ಟ್ವೀಟ್‌ ಮಾಡಿ,”ನನಗೆ ತಿಳಿದ ಮಾಹಿತಿ ಪ್ರಕಾರ ಗಲ್ವಾನ್‌ ಕಣಿವೆಯಲ್ಲಿ ಘರ್ಷಣೆಯಲ್ಲಿ ಚೀನಾದ ಸೈನಿಕರು ಮೃತಪಟ್ಟಿದ್ದಾರೆ. ಹೀಗಾಗಿ ನಾನು ಭಾರತಕ್ಕೆ ಒಂದು ವಿಚಾರ ಹೇಳಲು ಇಚ್ಛಿಸುತ್ತೇನೆ. ಚೀನಾದ ಸಹನೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ. ಭಾರತದ ಜೊತೆ ಘರ್ಷಣೆ ನಡೆಸಲು ಚೀನಾ ಬಯಸುತ್ತಿಲ್ಲ. ಆದರೆ ನಾವು ಯಾರಿಗೂ ಭಯ ಪಡುವುದಿಲ್ಲ” ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ತಂಟೆಕೋರ ಚೀನಾಗೆ ತಕ್ಕ ಉತ್ತರ – ಐವರು ಚೀನಿ ಸೈನಿಕರ ಹತ್ಯೆ

ಕಿರಿಕ್‌ ಮಾಡಿದ ಬಳಿಕ ನಾನು ಗಲಾಟೆ ಮಾಡಿಲ್ಲ ಭಾರತವೇ ದಾಳಿ ಮಾಡಿದೆ ಎಂದು ಸದಾ ದೂರುತ್ತಿರುವ ಪಾಕಿಸ್ತಾನ ಬುದ್ಧಿಯನ್ನು ಚೀನಾ ಈಗ ಪ್ರದರ್ಶಿಸಿದೆ. ಆದರೆ ಎರಡು ದೇಶದ ಸೈನಿಕರ ನಡುವೆ ಘರ್ಷಣೆ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದೆ.

ಗಾಲ್ವಾನ್‌ ಕಣಿವೆಯಲ್ಲಿ ಭಾರತದ ಸೇನೆ ಅಕ್ರಮವಾಗಿ ತನ್ನ ಜಾಗಕ್ಕೆ ನುಗ್ಗಿದೆ. ಈ ವೇಳೆ ನಮ್ಮ ಸೈನ್ಯ ಪ್ರಬಲವಾಗಿ ಪ್ರತಿಭಟನೆ ನಡೆಸಿದೆ. ಭಾರತ ಮತ್ತು ಚೀನಾ ಹಲವಾರು ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕ ಬಗೆಹರಿಸಿದೆ. ಅದೇ ರೀತಿಯಾಗಿ ಸಂಘರ್ಷವನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಚೀನಾ ನಡುವಿನ ಸಂಘರ್ಷದಲ್ಲಿ ಕರ್ನಲ್‌ ಮತ್ತು ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಚೀನಾ ಕಡೆಯಲ್ಲೂ ಪ್ರಾಣ ಹಾನಿ ಸಂಭವಿಸಿದೆ ಎಂದು ಭಾರತೀಯ ಸೇನೆ ಅಧಿಕೃತವಾಗಿ ತಿಳಿಸಿತ್ತು.

ಕೋವಿಡ್‌ 19 ಆರಂಭದಲ್ಲಿ ಈ ಬಗ್ಗೆ ಮೊದಲು ಮಾಹಿತಿ ನೀಡಿದ್ದ ವುಹಾನ್‌ ನಗರದ ಪ್ರಸಿದ್ಧ ವೈದ್ಯನಿಗೆ ಚೀನಾ ಟಾರ್ಚರ್‌ ನೀಡಿತ್ತು. ಅಷ್ಟೇ ಅಲ್ಲದೇ ಈ ವೈರಸ್‌ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಸುಳ್ಳು ಮಾಹಿತಿ ನೀಡಿತ್ತು. ಈಗ ಭಾರತದ ನಡುವೆ ನಡೆದ ಘರ್ಷಣೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ತಿಳಿಸುತ್ತಾ ಇಲ್ಲವೋ ಎನ್ನುವುದು ಸದ್ಯದ ಕುತೂಹಲ.

Share This Article
Leave a Comment

Leave a Reply

Your email address will not be published. Required fields are marked *