ತಿರುವನಂತಪುರಂ: ರಾಜ್ಯದ ಇಡುಕ್ಕಿ ಸಮೀಪ ಚಿರತೆಯನ್ನು ಬೇಟೆಯಾಡಿ ಕೊಂದು ತಿಂದ ಆರೋಪದಲ್ಲಿ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾಗಳು ಬಂಧಿಸಿದ್ದಾರೆ.
ಆರೋಪಿಗಳನ್ನು ಇಡುಕ್ಕಿಯ ಮನಕುಲಂ ಸಮೀಪದ ವಿನೋದ್ ಪಿ.ಕೆ(45), ವಿ.ಪಿ ಕುರಿಯಾಕೋಸ್ (74), ಸಿ.ಎಸ್.ಬಿನು (50), ಸಾಲಿ ಕುಂಜಪ್ಪನ್ (54) ಮತ್ತು ವಿನ್ಸೆಂಟ್ (50) ಎಂದು ಗುರುತಿಸಲಾಗಿದೆ.
ಆರೋಪಿ ವಿನೋದ್ ಮತ್ತು ಕುರಿಯಾಕೋಸ್ ಸೇರಿಕೊಂಡು ಅರಣ್ಯ ವ್ಯಾಪ್ತಿಯ 100 ಮೀಟರ್ ಅಂತರದಲ್ಲಿದ್ದ ಖಾಸಗಿ ಜಾಗದಲ್ಲಿ ಬಲೆಯನ್ನು ಹಾಕಿ ಚಿರತೆಯನ್ನು ಸೆರೆಹಿಡಿದಿದ್ದರು. 6 ವರ್ಷ ಪ್ರಾಯದ ಗಂಡು ಚಿರತೆಯನ್ನು ಹಿಡಿದ ಆರೋಪಿಗಳು ವಿನೋದ್ ಅವರ ಮನೆಗೆ ತಂದು ಕೊಂದು ಅಡುಗೆ ಮಾಡಿ ತಿಂದಿದ್ದಾರೆ. ನಂತರ ಅದರ ಚರ್ಮ ಮತ್ತು ಹಲ್ಲನ್ನು ಕಿತ್ತು ಮನೆಯ ಒಳಗಡೆ ಇಟ್ಟಿದ್ದರು. ಇದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಮನಕುಲಂ ರೇಂಜ್ ಆಫೀಸರ್ ವಿ.ಬಿ ಉದಯ ಸೂರ್ಯನ್ ನಾಡ್ಬಾದ್ ಅವರ ನೇತೃತ್ವದಲ್ಲಿ ಆರೋಪಿ ಮನೆಗೆ ದಾಳಿಮಾಡಿ 10 ಕೆಜಿ ಮಾಂಸ ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ವಿನೋದ್ ಚಿರತೆಯ ಬೇಟೆಯಾಡಿದ್ದು ಇತರ ಆರೋಪಿಗಳು ಮಾಂಸವನ್ನು ತಿನ್ನಲು ಜೊತೆಯಾಗಿದ್ದಾರೆ, ಹಾಗಾಗಿ ಭಾರತೀಯ ವನ್ಯಜೀವಿ ಕಾನೂನಿನ ಪ್ರಕಾರ 7 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂದು ಸ್ಥಳೀಯ ಪತ್ರಿಕೆಯಲ್ಲಿ ವರದಿಯಾಗಿದೆ.