ಚಿಕ್ಕಬಳ್ಳಾಪುರ: ಪಕ್ಷಿಗಳು ಇದ್ದಕ್ಕಿದ್ದಂತೆ ಸಾಯುತ್ತಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರಿನ ಕೆರೆಯಂಗಳದಲ್ಲಿ ಕಂಡುಬಂದಿದೆ.
ದೇಶದ ಹಲವೆಡೆ ಕೋರೋನಾ ನಡುವೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇದೀಗ ಚಿಕ್ಕಬಳ್ಳಾಪುರದಲ್ಲಿಯೂ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಯಾಕೆಂದರೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಇರುವ ಅಮಾನಿ ಗೋಪಾಲಕೃಷ್ಣ ಕೆರೆಯಂಗಳದಲ್ಲಿ ಪಕ್ಷಿಗಳು ಇದ್ದಕ್ಕಿದ್ದಂತೆ ಸಾಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪಕ್ಷಿಗಳು ದೇಶ ವಿದೇಶಗಳಿಂದ ಕೆರೆಯಂಗಳಕ್ಕೆ ವಲಸೆ ಬಂದಿದ್ದು ಕೆಲ ಪಕ್ಷಿಗಳು ಅಲ್ಲಲ್ಲಿ ಸಾವನ್ನಪ್ಪಿ ಹಲವು ಪಕ್ಷಿಗಳು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಕುರಿತಾದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಪಕ್ಷಿಗಳ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ಗೆ ಕಳಿಸಿದ್ದಾರೆ.
ಕಪ್ಪು ಬಣ್ಣದ ರೆಕ್ಕೆಗಳಿರುವ ಸ್ಟಿಲ್ಟ್ ಎಂಬ ಎರಡು ಪಕ್ಷಿಗಳು ಸಾವನ್ನಪ್ಪಿವೆ. ಬೇರೆ ಪ್ರಭೇದದ ಎರಡು ಪಕ್ಷಿಗಳು ಅಸ್ವಸ್ಥಗೊಂಡಿವೆ. ಸಾವನ್ನಪ್ಪಿರುವ ಎರಡು ಪಕ್ಷಿಗಳನ್ನು ಪರೀಕ್ಷೆಗೆ ಬೆಂಗಳೂರಿನ ಪಶು ವೈದ್ಯಕೀಯ ಜೈವಿಕ ತಂತ್ರಜ್ಞಾನ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಸತ್ಯಸತ್ಯಾತೆ ತಿಳಿಯಲಿದೆ ಎಂದು ಪಶು ವೈದ್ಯ ಇಲಾಖೆಯ ಸಹಾಯಕ ಉಪನಿರ್ದೇಶಕ ಶ್ರೀನಾಥ್ ರೆಡ್ಡಿ ತಿಳಿಸಿದ್ದಾರೆ.