ಚಿಕ್ಕಮಗಳೂರು: ಹೂವಿನಹಡಗಲಿ ಡಿಪೋದಲ್ಲಿ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ತರೀಕೆರೆ ತಾಲೂಕಿನ ಚೀರನಹಳ್ಳಿ ಮೂಲದ ಮಂಜುಳ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಪೋಷಕರು ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.
ಮೃತ ಮಂಜುಳ ಮೂಲತಃ ದಾವಣಗೆರೆ ಜಿಲ್ಲೆ ಮಾಯಕೊಂಡ ನಿವಾಸಿ. ಎಂಟು ವರ್ಷಗಳ ಹಿಂದೆ ತರೀಕೆರೆ ತಾಲೂಕಿನ ಚೀರನಹಳ್ಳಿ ಪ್ರದೀಪ್ ಜೊತೆ ವಿವಾಹವಾಗಿತ್ತು. ಪ್ರದೀಪ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ, ಹೀಗಾಗಿ ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಮಹಿಳೆ ಪೋಷಕರು ಆರೋಪಿಸಿದ್ದಾರೆ.
ದಂಪತಿಗೆ ಐದು ವರ್ಷದ ಹೆಣ್ಣು ಮಗು ಹಾಗೂ 3 ವರ್ಷದ ಗಂಡು ಮಗುವಿದೆ. ಮೈಕ್ರೋ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್, ಎರಡು ವರ್ಷಗಳಿಂದ ಮನೆಯಲ್ಲೇ ಮಕ್ಕಳನ್ನ ನೋಡಿಕೊಂಡು ಇದ್ದ. ಹೂವಿನಹಡಗಲಿ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಂಜುಳ ಪತಿ ಊರಿಗೆ ಬಂದಿದ್ದರು.
ಪ್ರದೀಪ್ ಹಾಗೂ ಮಂಜುಳ ನಡುವೆ ಆಗಾಗ್ಗೇ ಜಗಳವಾಗಿ ಮನಸ್ಥಾಪ ಕೂಡ ಇತ್ತಂತೆ. ಊರಿಗೆ ಬಂದ ಮಂಜುಳಾಗೆ ಪತಿ ಪ್ರದೀಪ್ ಬಾಕಿ ಇದ್ದ ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ. ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಂಜುಳ, ಕಳೆದ ರಾತ್ರಿ ವಿಷ ಕುಡಿದಿದ್ದಾಳೆ. ಬಳಿಕ ಪತಿ ಹಾಗೂ ಕುಟುಂಬಸ್ಥರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ಮಂಜುಳ ಪೋಷಕರಿಗೆ ಬೆಳಗ್ಗೆ ಆರು ಗಂಟೆಗೆ ತಿಳಿಸಿದ್ದಾರೆ. ಇದು ಮಂಜುಳ ಪೋಷಕರ ಅನುಮಾನಕ್ಕೆ ಕಾರಣವಾಗಿದೆ. ಪತಿ ಮನೆಯವರೇ ಹೊಡೆದು ಉಸಿರುಗಟ್ಟಿ ಸಾಯಿಸಿ ಬಾಯಿಗೆ ವಿಷ ಹಾಕಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ ದೇಹದ ಮೇಲೆ ಗಾಯದ ಕಲೆಗಳಿವೆ. ವಿಷ ಕುಡಿದವರ ದೇಹದ ಬಣ್ಣ ಬದಲಾಗುತ್ತೆ. ಆದರೆ ಮಂಜುಳಾ ದೇಹ ಮಾಮೂಲಿಯಂತಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಿದ್ದಾರೆಂದು ಮೃತ ಮಂಜುಳ ಪೋಷಕರು ಆರೋಪಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.