ಶಿವಮೊಗ್ಗ: ಹಿಂದೂಗಳ ಪವಿತ್ರ ಹಬ್ಬ ಗಣೇಶ ಹಬ್ಬ ಆಚರಣೆ. ಆದರೆ ಕೊರೊನಾ ಸೋಂಕು ಮುಂದಿಟ್ಟುಕೊಂಡು ಸರ್ಕಾರ ಗಣೇಶ ಹಬ್ಬ ಆಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಒಂದು ವೇಳೆ ಇಂತಹ ಸಾಹಸಕ್ಕೆ ಕೈ ಹಾಕಿದರೇ ಸಿಎಂ ಯಡಿಯೂರಪ್ಪ ಹಾಗೂ ಅವರ ಸರ್ಕಾರ ನಾಶವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ನೆಪವಿಟ್ಟುಕೊಂಡು ಗಣೇಶನ ಹಬ್ಬಕ್ಕೆ ಕಡಿವಾಣ ಹಾಕುವುದು ಎಷ್ಟು ಸರಿ? ನಾನಂತೂ ಗಣಪತಿ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಣೆ ಮಾಡುತ್ತೇನೆ. ಈ ಹಿಂದೆ ಮಾಡುತ್ತಿದ್ದ ಹಾಗೆ ಮೆರವಣಿಗೆ ಸಹ ನಡೆಸುತ್ತೇನೆ. ಅದು ಯಾರೂ ತಡೆಯುತ್ತಾರೋ ತಡೆಯಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ. ಕೊರೊನಾ ನಡುವೆಯೂ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ ಪೂಜೆ ವೇಳೆ ಪ್ರಧಾನಿ ಮೋದಿಯವರೇ ಅದ್ಧೂರಿಯಾಗಿ ನಡೆಸಿದ್ದಾರೆ. ಹೀಗಿರುವಾಗ ಗಣಪತಿ ಹಬ್ಬ ಆಚರಣೆಗೆ ಹೇಗೆ ತೊಂದರೆಯಾಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕಾದರೆ 10 ಮಾರ್ಗಸೂಚಿಗಳನ್ನು ಪಾಲಿಸಿ
ಗಣೇಶನನ್ನು ಶ್ರದ್ದಾ ಭಕ್ತಿಯಿಂದ ಪೂಜಿಸಿದರೇ ಎಲ್ಲಾ ವಿಘ್ನಗಳು ನಿವಾರಣೆ ಆಗಲಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರಿಯಾದ ಸಮಯದಲ್ಲಿ ಅಧಿಕಾರ ಸ್ವೀಕಾರ ಮಾಡಿಲ್ಲ. ಹೀಗಾಗಿ ರಾಜ್ಯದಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸಿಎಂ ಬಿಎಸ್ವೈ ಅವರಿಗೂ ಸಹ ಇತ್ತೀಚೆಗೆ ನೆನಪಿನ ಶಕ್ತಿ ಕಡಿಮೆಯಾಗಿದ್ದು, ಅಕ್ಕಪಕ್ಕದವರ ಬಳಿ ಪದೇ ಪದೇ ಕೇಳಿ ತಿಳಿದುಕೊಳ್ಳುವಂತೆ ಆಗಿದೆ ಎಂದರು.