ಮಂಗಳೂರು: ಕೊರೊನಾ ಆತಂಕದ ನಡುವೆ ಇಂದು ಎಲ್ಲೆಡೆ ಗಣೇಶ ಚತುರ್ಥಿ ಸಡಗರ ಸಂಭ್ರಮದಿಂದ ನಡೆಯಿತು. ಇದೇ ವೇಳೆ ಮಂಗಳೂರಿನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ಹಚ್ಚ ಹಸುರಿನ ಪ್ರಕೃತಿಯ ಮಧ್ಯೆ ಗಣೇಶ ಪ್ರತ್ಯಕ್ಷವಾಗಿ ಕರಾವಳಿಗರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಮಂಗಳೂರಿನ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಅಮೃತೇಶ್ವರ ದೇವಸ್ಥಾನಕ್ಕೆ ಹೋಗುವ ಪ್ರವೇಶ ದ್ವಾರದ ಬಳಿ ಪ್ರಕೃತಿಯ ಮಧ್ಯೆ ಗಣೇಶ ಇಂದು ಎದ್ದು ನಿಂತಿದ್ದಾನೆ. ರಸ್ತೆ ಪಕ್ಕದಲ್ಲಿರುವ ಮರವೊಂದಕ್ಕೆ ಬಳ್ಳಿ, ಗಿಡಗಳು ಸುತ್ತಿಕೊಂಡಿದ್ದು ಗಣೇಶನ ದೊಡ್ಡ ಮೂರ್ತಿಯಂತೆ ಎದ್ದು ನಿಂತಿದೆ.
ಕಳೆದ ಕೆಲ ದಿನದಿಂದ ಈ ರೀತಿ ಇದ್ರೂ ಯಾರೂ ಗಮನಿಸದೆ, ಅಚ್ಚರಿ ಎಂಬಂತೆ ಗಣೇಶ ಚತುರ್ಥಿಯ ದಿನವಾದ ಇಂದೇ ಸ್ಥಳೀಯ ನಿವಾಸಿ ವಿಶಾಲ್ ವಾಮಂಜೂರು ಎಂಬ ಫೋಟೋಗ್ರಾಫರ್ ನ ಕಣ್ಣಿಗೆ ಈ ಪ್ರಕೃತಿ ಗಣಪ ಬಿದ್ದಿದ್ದಾನೆ. ವಿಶಾಲ್ ಅವರ ಕಣ್ಣಿದ ಬಿದ್ದ ಈ ಗಣಪನನ್ನು ಅಚ್ಚರಿಯಿಂದಲೇ ವಿಶಾಲ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಫೋಟೋ, ವಿಡಿಯೋ ಅನ್ನು ವಿಶಾಲ್ ಹಂಚಿಕೊಂಡಿದ್ದು ಬಳಿಕ ಭಾರೀ ವೈರಲ್ ಆಗಿತ್ತು.
ಬಳಿಕ ಈ ದೃಶ್ಯವನ್ನು ನೋಡಲೆಂದು ಜನ ಆಗಮಿಸಿದ್ದು, ಪ್ರಕೃತಿಯ ಗಣಪನನ್ನು ನೋಡಿ ಸಂಭ್ರಮಿಸಿದ್ದಾರೆ. ಗಣೇಶ ಚತುರ್ಥಿಯಂದೇ ಈ ರೀತಿಯ ಅಚ್ಚರಿ ಕಾಣಿಸಿಕೊಂಡಿದ್ದು ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ.