ತುಮಕೂರು: ಕೊರೊನಾ ಸೋಂಕು ತಗಲಿರುವ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲೇಬೇಕಾಗುತ್ತಿದೆ. ಆದರೆ ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ. ಅದೇ ರೀತಿ ಈ ಅವ್ಯವಸ್ಥೆಯ ಬಿಸಿ ಉಪತಹಶೀಲ್ದಾರರಿಗೂ ತಟ್ಟಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಉಪ ತಹಶೀಲ್ದಾರ್ ಪರಮೇಶ್ವರಯ್ಯ ಅವರು ತಿಪಟೂರು ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲಿನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಇದೀಗ ಅಲ್ಲಿನ ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ.
ಗಬ್ಬು ನಾರುವ ಹಾಸ್ಟೆಲ್, ಗುಣಮಟ್ಟದ ಆಹಾರ ಇಲ್ಲದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ಯಾರಂಟೈನ್ ಅವಧಿ ಮುಗಿದರೂ ಮನೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಹಶೀಲ್ದಾರ್ ಹಾಗೂ ಟಿಎಚ್ಓ ವಿರುದ್ಧ ಎಸಿಗೆ ದೂರು ನೀಡಿದ್ದಾರೆ.
ಬಿ.ಪಿ ಶುಗರ್ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳುತಿದ್ದೇನೆ. ನಾಡ ಕಚೇರಿಗೆ ಬಂದಿದ್ದಿ ಸೋಂಕಿತ ವ್ಯಕ್ತಿಯಿಂದ ಕ್ಯಾರಂಟೈನ್ ಮಾಡಲಾಗಿತ್ತು. ಟೆಸ್ಟ್ ವರದಿಯಲ್ಲಿ ನೆಗಿಟಿವ್ ಬಂದರೂ ಮೀನಾಮೇಷ ಏಕೆ ಅಂತಾ ಪ್ರಶ್ನೆ ಮಾಡಿದ್ದಾರೆ.
ಉಪವಿಭಾಗಾಧಿಕಾರಿಗಳಿಗೆ ಅಹವಾಲು:
ಸರ್, ನಾನು ಪರಮೇಶ್ವರಯ್ಯ ಎಂದು ನೋಣವಿನಕೆರೆ ಉಪತಹಶಿಲ್ದಾರ್. ಜೂನ್ 18ರಂದು ನಮ್ಮ ಕಚೇರಿಗೆ ಪಾಸಿಟಿವ್ ಇದ್ದ ವ್ಯಕ್ತಿ ಬಂದಿದ್ದ. ಹಾಗಾಗಿ ನಾನು ಸೇರಿದಂತೆ ನಮ್ಮ ಕಚೇರಿಯ ಐದು ಜನರನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದವರು ಎಂದು ತಿಪಟೂರು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇಟ್ಟಿದ್ದಾರೆ.
ಸರ್ಕಾರದ ಮಾರ್ಗ ಸೂಚಿ ಪ್ರಕಾರ 7 ದಿನ ಹೋಂ ಕ್ವಾರಂಟೈನ್ ಮತ್ತೇ 7 ದಿನ ಸಾಂಸ್ಥಿಕ ಕ್ವಾರಂಟೈನ್ ಅಂತ ಇದೆ. ಆದರೆ 15 ದಿನದಿಂದ ತಿಪಟೂರು ತಹಶೀಲ್ದಾರ್ ಹಾಗೂ ಟಿಎಚ್ಓ ನಮ್ಮನ್ನ ಕೂಡಿ ಹಾಕಿದ್ದಾರೆ. ನಮ್ಮ ಪರೀಕ್ಷೆ ವರದಿ ಜೂನ್ 20 ರಂದು ಬಂದಿದೆ ಅನ್ನುತ್ತಾರೆ. ಅದರಲ್ಲಿ ನೆಗೆಟಿವ್ ಇದೆ ಅಂತಾರೆ. ಯಾವ ವರದಿನೂ ನಮಗೆ ಬಹಿರಂಗ ಪಡಿಸಿಲ್ಲ.
ನಾವು ಇರುವ ಕೊಠಡಿಯಲ್ಲಿ ಮೂಲಭೂತ ಸೌಕರ್ಯ ಇಲ್ಲ. ಸ್ವಚ್ಚತೆ ಇಲ್ಲ, ಸೊಳ್ಳೆಗಳ ಕಾಟ. ಕಳೆದ ಮೂರುದಿನಗಳಿಂದ ಕರೆಂಟ್ ಇಲ್ಲ. ಕೊರೊನಾ ನೆಗೆಟಿವ್ ಇದ್ದ ವ್ಯಕ್ತಿ ಇಲ್ಲಿಗೆ ಬಂದರೆ ಖಂಡಿತಾ ಪಾಸಿಟಿವ್ ಬಂದು ಇಲ್ಲಿಂದ ಹೊರಡೋದು. ಇಲ್ಲಿಯ ಅವ್ಯವಸ್ಥೆ ಬಗ್ಗೆ ತಹಶೀಲ್ದಾರ್ ನಗರಸಭೆ ಕಮಿಷನರ್ ಅವರಿಗೆ ಹೇಳಿದ್ದೇನೆ. ಯಾರೂ ಗಮನ ಕೊಟ್ಟಿಲ್ಲ. ಎರಡು ಬಾರಿ ನೆಗೆಟಿವ್ ವರದಿ ಬಂದಿದೆ. ಆದರೂ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ನಮ್ಮನ್ನು ಕೂಡಿ ಹಾಕಿದ್ದಾರೆ. ನನಗೆ ಬಿಪಿ ಹೃದಯ ಸಂಬಂಧಿ ಕಾಯಿಲೆ ಇದೆ. ಯಾವೂದಕ್ಕೂ ಇಲ್ಲಿ ವ್ಯವಸ್ಥೆ ಇಲ್ಲ ಎಂದು ದೂರಿದ್ದಾರೆ.