ಕೋಲಾರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತ ಕೋಲಾರದಲ್ಲಿ ಕೊರೊನಾ ಆತಂಕಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
ಕೋಲಾರದ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ನಾಗರಾಜ್ (37) ಮನೆಯಲ್ಲಿ ನೇಣಿಗೆ ಶರಣಾದ ವ್ಯಕ್ತಿ. ತಮ್ಮನಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅಣ್ಣ ನಾಗರಾಜ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ನಾಗರಾಜ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಆದರೆ ನಾಗರಾಜ್ ಸಹೋದರನಿಗೆ ಶನಿವಾರ ಸಂಜೆ ಕೊರೊನಾ ದೃಢವಾಗಿದ್ದು, ನಂತರ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದನು. ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಾಗರಾಜ್ಗೆ ತಮ್ಮನಿಗೆ ಕೊರೊನಾ ಬಂದಿರುವ ವಿಚಾರ ತಿಳಿದಿದೆ. ನಂತರ ರಾತ್ರಿಯೇ ನಾಗರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಾಥಮಿಕ ಸಂಪರ್ಕದಲ್ಲಿದ್ದ ತನಗೂ ಹಾಗೂ ಕುಟುಂಬಸ್ಥರಿಗೂ ಕೊರೊನಾ ತಗಲಿರುವ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮಾಹಿತಿ ತಿಳಿದು ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.