– ಡಬಲ್ ಮರ್ಡರ್ ಮಾಡಿದ್ದ 6 ಆರೋಪಿಗಳು ಅಂದರ್
ಹಾಸನ: ತೋಟದ ಮನೆಯಲ್ಲಿ ವೃದ್ಧ ದಂಪತಿಯ ಜೋಡಿ ಕೊಲೆ ಪ್ರಕರಣರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದು, ಮಂಜಶೆಟ್ಟಿ(23), ಪ್ರಸಾದ್(25), ನಂದನ್ ಕುಮಾರ್(33), ಯೋಗಾನಂದ(29), ಭರತ್(24), ಮಧು(25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು 15 ಲಕ್ಷ ಮೌಲ್ಯದ 316 ಗ್ರಾಂ ಚಿನ್ನ, ಎರಡು ಕೆಜಿ 250 ಗ್ರಾಂ ಬೆಳ್ಳಿ, ಸುಮಾರು 25 ಸಾವಿರ ನಗದು, ಮೂರು ಮೊಬೈಲ್ ಫೋನ್, ಒಂದು ಕಾರು, ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರ ಮಾಹಿತಿ ಮೇರೆಗೆ ಉಳಿದ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ದಂಪತಿಯ ಎಟಿಎಂ ಕಾರ್ಡ್ನಿಂದ ಹಣ ಪಡೆಯಲು ಹೋಗಿದ್ದರಿಂದ ಆರೋಪಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಎಟಿಎಂ ಮೂಲಕ ಎಲ್ಲರನ್ನೂ ಬಂಧಿಸಲು ಸಾಧ್ಯವಾಗಿದೆ.
ಈ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳೆಲ್ಲ ಪೊಲೀಸರ ವಶವಾಗಿದ್ದು, ತನಿಖಾ ತಂಡಕ್ಕೆ ಎಸ್ಪಿ ಶ್ರೀನಿವಾಸ್ಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಆಗಸ್ಟ್ 29 ರಂದು ಚನ್ನರಾಯಪಟ್ಟಣ ತಾಲೂಕಿನ, ಆಲಗೊಂಡನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಮುರಳೀಧರ್ ಮತ್ತು ಉಮಾದೇವಿ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.