ಲಕ್ನೋ: ಕೊರೊನಾ ಸೋಂಕಿತನಿಗೆ ಔಷಧಿ ನೀಡಲು ಹಳ್ಳಿಯೊಂದಕ್ಕೆ ಹೋಗುತ್ತಿದ್ದ ವೈದ್ಯಕೀಯ ತಂಡಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಪಾಸ್ವಾನ್ ಚೌಕ್ನಲ್ಲಿ ನಡೆದಿದೆ.
ವೈದ್ಯಕೀಯ ತಂಡದ ವಾಹನದ ಮೇಲೆ ಗುಂಪೊ0ದು ಹಲ್ಲೆ ನಡೆಸಿದ ಪರಿಣಾಮ, ವಾಹನದಲ್ಲಿದ್ದ ಇಬ್ಬರು ವೈದ್ಯರು, ಚಾಲಕರು ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ವೈದ್ಯಕೀಯ ಸಿಬ್ಬಂದಿ ನೀರಜ್ ಕುಮಾರ್ ಸಿಂಗ್ ನೀಡಿರುವ ದೂರಿನಂತೆ ಬೈರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಘನಶ್ಯಾಮ ಎಂಬುವರಿಗೆ ಔಷಧಿ ನೀಡಲು ಮತ್ತು ಅವರು ಮನೆಯಲ್ಲೇ ಪ್ರತ್ಯೇಕವಾಗಿದ್ದಾರಾ ಎಂಬುದನ್ನು ಪರಿಶೀಲಿಸಲು ವೈದ್ಯಕೀಯ ತಂಡ ಹಳ್ಳಿಗೆ ತೆರಳಿತ್ತು. ಈ ವೇಳೆ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿದೆ.
ಸುಮಾರು 60 ಜನರಿದ್ದ ಗುಂಪು ವೈದ್ಯಕೀಯ ತಂಡದ ವಾಹನವನ್ನು ಸುತ್ತುವರಿದಿತ್ತು. ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಡಾ.ನೀರಜ್ ಕುಮಾರ್ ಸಿಂಗ್, ಡಾ.ಅಮಿತ್ ಕುಮಾರ್ ಗೌತಮ್, ಲ್ಯಾಬ್ ಸಹಾಯಕ ಉಪೇಂದ್ರ ಪ್ರಸಾದ್ ಮತ್ತು ಚಾಲಕ ಲಾಲ್ ಬಹದ್ದೂರ್ ಯಾದವ್ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿತೇಂದ್ರ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಯಾದವ್ ತಿಳಿಸಿದರು.