ಉಡುಪಿ: ಕಣ್ಣಿಗೆ ಕಾಣುವ, ಓಡಾಡುವ ದೇವರು ಅಂತ ನಾಗನನ್ನು ಕರಾವಳಿಯಲ್ಲಿ ಆರಾಧನೆ ಮಾಡುತ್ತಾರೆ. ಮನೆಗಳಲ್ಲಿ ನಾಗನ ಕಲ್ಲಿಗೆ ಹಾಲೆರೆದು ಭಕ್ತರು ಪುನೀತರಾಗಿದ್ದಾರೆ. ಈ ನಡುವೆ ಉಡುಪಿಯ ಕೋಟೇಶ್ವರ ಬೀಚ್ ಗೆ ಹೋದವರಿಗೆ ವಿಭಿನ್ನ ನಾಗನ ದರ್ಶನವಾಗಿದೆ.
ಹಿಂದೂ ಪಂಚಾಂಗದ ಪ್ರಕಾರ ನಾಗರ ಪಂಚಮಿ ವರ್ಷದ ಮೊದಲ ಹಬ್ಬ. ಆದರೆ ಈ ಬಾರಿ ನಾಗರ ಪಂಚಮಿಗೆ ಕೊರೊನಾ ಅಡ್ಡ ಬಂದಿದೆ. ಉಡುಪಿಯಲ್ಲಿ ಸಾರ್ವಜನಿಕ ಆಚರಣೆ ಆಗಿಲ್ಲ. ಈ ನಡುವೆ ಉಡುಪಿ ಕಲಾವಿದ ಹರೀಶ್ ಸಾಗ ಮರಳಿನ ಮೇಲೆ ನಾಗನ ಕಲಾಕೃತಿ ರಚಿಸಿದ್ದಾರೆ. ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರು ಸಾಗ ಅವರಿಗೆ ಸಾಥ್ ಕೊಟ್ಟಿದ್ದಾರೆ.
ಹರೀಶ್ ಸಾಗ, ಜೈ ನೇರಳಕಟ್ಟೆ, ರಾಘವೇಂದ್ರ ಕೋಟೇಶ್ವರದ ಕೋಡಿ ಬೀಚ್ ನಲ್ಲಿ ಕರೋನ ರಾಕ್ಷಸನಿಂದ ರಕ್ಷಿಸು ಎಂಬ ಸಂದೇಶದೊಂದಿಗೆ ಮರಳುಶಿಲ್ಪ ರಚಿಸಿದ್ದಾರೆ. ವಿಶೇಷ ಕಲಾಕೃತಿ ಮೂಲಕ ಕೊರೊನಾ ದೂರವಾಗಲಿ, ಮನುಕುಲಕ್ಕೆ ಒಳಿತಾಗಲಿ ಎಂದು ಹಾರೈಸಿದ್ದಾರೆ. ಸಾಗ ಟೀಮ್ ವರ್ಷದ ವಿಶೇಷ ದಿನಗಳಲ್ಲಿ ವಿಭಿನ್ನ ಮರಳು ಕಲಾಕೃತಿಗಳನ್ನು ರಚಿಸುತ್ತಾರೆ. ಸಂದೇಶದ ಮೂಲಕ ಗಮನ ಸೆಳೆಯುತ್ತಾರೆ.