– ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧ
ಬೆಂಗಳೂರು: ಕೋವಿಡ್ 19 ನಿರ್ವಹಣಾ ಕಾರ್ಯಕ್ಕೆ ಬರದೇ ಇರುವ ನೌಕರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೊರೊನಾಗೆ ಭಯಪಟ್ಟು ಕೆಲವರು ಬರುತ್ತಿಲ್ಲ. ಅಂಥವರಿಗೆಲ್ಲ ನೋಟಿಸ್ ಕೊಡಲಾಗಿದೆ. ನೋಟಿಸ್ಗೆ ಏನು ಉತ್ತರ ಕೊಡುತ್ತಾರೆ ಅನ್ನೋದನ್ನು ನೋಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿರ್ವಹಣೆ ಕರ್ತವ್ಯ ಮಾಡದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೊರೊನಾಗೆ ಭಯ ಪಡುವ ಅಗತ್ಯ ಇಲ್ಲ. ವೈರಸ್ಗೆ ಆತಂಕ ಪಡಬೇಕಾಗಿಲ್ಲ. ಕೆಲ ಕೊರೊನಾ ವಾರಿಯರ್ಸ್ ಭಯದಿಂದ ಬರುತ್ತಿಲ್ಲ. ಅವರು ಕರ್ತವ್ಯದಿಂದ ದೂರ ಹೋದರೆ ಖಂಡಿತಾ ಕ್ರಮ ತೆಗೆದುಕೊಳ್ಳುವುದಾಗಿ ಡಿಸಿಎಂ ಹೇಳಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ, ನೆರೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈ ಬಾರಿ ಮಳೆ ಅನಾಹುತ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಭೀತಿ ಇರೋ ಕಡೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗ್ತಿದೆ. ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ ಎಂದರು.
ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಸಹಕಾರ ಸಿಗ್ತಿದೆ. ಪ್ರಕೃತಿ ವಿಕೋಪಗಳ ವೇಳೆ ಸಿಗಬೇಕಾದ ಅನುದಾನ ಸಿಗುತ್ತೆ. ಕೇಂದ್ರ ಪ್ರಕೃತಿ ವಿಕೋಪ ಬಂದಾಗಲೆಲ್ಲ ನೆರವು ಕೊಟ್ಟಿದೆ ಎಂದು ತಿಳಿಸಿದರು.