ಚಿತ್ರದುರ್ಗ: ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ.ಮಕ್ಕಳು ಮರಿ ಎನ್ನದೇ ಎಲ್ಲರನ್ನು ಬಲಿ ಪಡೆಯುತ್ತಿದೆ.ಹೀಗಾಗಿ ಆತಂಕಗೊಂಡಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮಸ್ಥರು ಕೊರೊನಾ ತೊಲಗಲಿ ಎಂದು ಅಜ್ಜಿಹಬ್ಬ ಆಚರಣೆ ಮಾಡಿದ್ದಾರೆ.
ಪಟ್ರೆಹಳ್ಳಿ ಗ್ರಾಮದ ಗ್ರಾಮದೇವತೆ ಕರೇಕಲ್ ಮಾರಮ್ಮಗೆ ಸಾಂಪ್ರದಾಯಿಕವಾಗಿ ಎಡೆ ನೀಡಿ,ಪೂಜಾಕೈಂಕಾರ್ಯ ನೆರವೇರಿಸಿದ್ದಾರೆ.ಪೂರ್ವಜರಕಾಲದಿಂದಲೂ ಗ್ರಾಮಕ್ಕೆ ಯಾವುದೇ ಸಾಂಕ್ರಾಮಿಕ ರೋಗಗಳು,ಸಮಸ್ಯೆಗಳು ಎದುರಾದಾಗ ಗ್ರಾಮದಲ್ಲಿ ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕೊರೊನಾ ತೊಲಗಲಿ, ಲೋಕಕಲ್ಯಾಣವಾಗಲಿ ಅಂತ ಆಚರಿಸಲಾಯಿತು.
ಈ ಅಜ್ಜಿಹಬ್ಬವನ್ನು ಆಚರಿಸಲು ಮನಯನ್ನೆಲ್ಲ ಶುದ್ಧಿಗೊಳಿಸಿ, ಮಡಿಯಿಂದ ದೇವತೆಗೆ ಹೋಳಿಗೆ ಸೇರಿದಂತೆ ವಿವಿಧ ಸಿಹಿ ಖಾದ್ಯಗಳನ್ನು ಎಡೆಯಾಗಿ ಸಿದ್ದಪಡಿಸಲಾಗುತ್ತದೆ. ಒಂದು ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪನ್ನು ಇಟ್ಟು ಹೊಸ ಮರ, ಬಳೆ ಪೂಜಾಸಾಮಗ್ರಿಗಳೊಂದಿಗೆ ಕರೇಕಲ್ ಮಾರಮ್ಮದೇವಿಯ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಹೊರವಲಯದಲ್ಲಿರುವ ಬೇವಿನ ಮರದ ಕೆಳಗೆ ಎಡೆಯನ್ನುಇಟ್ಟು ಪೂಜಿಸಿದರೆ ಗ್ರಾಮಕ್ಕೆ ಎದುರಾಗಿರುವ ಸಂಕಷ್ಟ ಬಗೆಹರೆಯುವುದೆಂಬ ನಂಬಿಕೆ ಇಲ್ಲಿದೆ. ಹೀಗಾಗಿ ಕಳೆದ ಮೂರು ವರ್ಷಗಳ ಹಿಂದೆ ಆಚರಿಸಲಾಗಿದ್ದ ಅಜ್ಜಿ ಹಬ್ಬ ಮತ್ತೆ ಕೊರೊನಾ ಓಡಿಸಲು ಗ್ರಾಮದಲ್ಲಿ ಶಾಂತಿ ನೆಲೆಸಲು ಆಚರಿಲಾಯಿತು.