ಬೆಂಗಳೂರು: ಕೊರೊನಾ ವೈರಸ್ 2ನೇ ಅಲೆಯ ಬಳಿಕ ಮಾನವೀಯ ಕಾರ್ಯಗಳ ಮೂಲಕ ಸದಾ ಸುದ್ದಿಯಲ್ಲಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹೌದು. ಶಾಸಕರು ಕೊರೋನಾ ಎರಡನೇ ಅಲೆ ಬಂದ ಮೇಲೆ ಜನಸೇವೆಯ ಮೂಲಕ ಫುಲ್ ಫೇಮಸ್ ಆಗಿದ್ದಾರೆ. ಕಾಲಿಗೆ ಚಕ್ರಕಟ್ಟಿಕೊಂಡು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಆಹಾರ, ವೈದ್ಯಕೀಯ ನೆರವು, ಕೊರೊನಾ ಸೋಂಕಿತರು ನೆಲೆಸಿರುವ ಕೇಂದ್ರಗಳಲ್ಲಿ ವಾಸ ಮಾಡಿ ಯೋಗ, ಧ್ಯಾನ ಶಿಬಿರ, ಹಾಡುಗಳನ್ನು ಹಾಡಿ ರಂಜಿಸುತ್ತಿದ್ದಾರೆ.
ಇಂದು ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಿಂದ ಕೊರೊನಾ ಗುಣಮುಖರಾಗಿ ಡಿಸ್ಚಾರ್ಜ್ ಆಗುವವರಿಗೆ ಹೂಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ. ಶಾಸಕರ ಪ್ರೀತಿಗೆ ಜನ ಮೂಕವಿಸ್ಮಿತರಾಗಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯರನ್ನ ಪತಿಯಾಗಿ ಪಡೆದ ನಾನೇ ಅದೃಷ್ಟವಂತೆ: ಕೊಂಡಾಡಿದ ಪತ್ನಿ ಸುಮಿತ್ರಾ
ಈ ಹಿಂದೆ ಶಾಸಕರ ಕೋವಿಡ್ ಕಾರ್ಯಕ್ಕೆ ದುಬೈ ಕನ್ನಡಿಗರೂ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದ್ದರು. ವೀಡಿಯೋ ಸಂದೇಶದ ಮೂಲಕ ಹೊನ್ನಾಳಿ ಹಾಗೂ ನ್ಯಾಮತಿಯ ಕೊರೊನಾ ಸೋಂಕಿತರ ಜೊತೆಗಿದ ಶಾಸಕ ರೇಣುಕಾಚಾರ್ಯರ ಕಾರ್ಯಕ್ಕೆ ಮೆಚ್ಚಿದ್ದರು. ದುಬೈ ಕನ್ನಡಿಗರ ಸಂಘದ ಅಧ್ಯಕ್ಷೆ ಉಮಾ ವಿದ್ಯಾಧರ್ ಮತ್ತು ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊರೊನಾ ಕಾಲದಲ್ಲಿ ನಿಮ್ಮ ಸೇವೆ ಅಪಾರ, ಶಾಸಕರೇ ನಿಮ್ಮಲ್ಲಿರುವ ಸಾಮಾಜಿಕ ಕಳಕಳಿ ಕಂಡು, ಕೆಲಸ, ಕಾರ್ಯಗಳನ್ನು ಮೆಚ್ಚಿಕೊಂಡಿದ್ದೇವೆ ಎಂದು ಹೇಳಿದ್ದರು.
ಇಂತಹ ಕಷ್ಟದ ಸಂದರ್ಭದಲ್ಲಿ ನಿಮ್ಮ ನಿಸ್ವಾರ್ಥ ಸೇವೆ, ಜನರೊಂದಿಗೆ ಬೆರೆಯುವ ರೀತಿ, ನಿಮ್ಮ ಮಾತುಗಳನ್ನು ಕೇಳಿದಾಗ ಮೆಚ್ಚುಗೆಯಾಗುತ್ತದೆ. ಅವರ ನೋವು ನಿಮ್ಮದು ಎಂದು ತಿಳಿಯುವ ನಿಮ್ಮ ಗುಣ ನಿಜಕ್ಕೂ ಶ್ಲಾಘನೀಯ. ನಿಮ್ಮ ಕ್ಷೇತ್ರದ ಜನರು ಪುಣ್ಯವಂತರು ಮತ್ತು ನಿಮಗೆ ಸಹಕಾರ ನೀಡುತ್ತಿರುವ ನಿಮ್ಮ ಕುಟುಂಬದವರಿಗೂ ನಮ್ಮ ನಮಸ್ಕಾರಗಳು. ನಿಮ್ಮ ಸೇವೆ ಹೀಗೆ ಸಾಗಲಿ ಮತ್ತು ಹೆಚ್ಚಿನ ಶ್ರೇಯಸ್ಸನ್ನು ಭಗವಂತ ನೀಡಲಿ ಎಂದು ಹಾರೈಸಿದ್ದರು.