– ಸಾಮಾಜಿಕ ಅಂತರವಿಲ್ಲ, ರೂಲ್ಸ್ ಬ್ರೇಕ್ ಮಾಡಿದ ಪಾಷಾ ಬೆಂಬಲಿಗರು
ಬೆಂಗಳೂರು: ಕೊರೊನಾದಿಂದ ಗುಣಮುಖನಾಗಿ ಬಂದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಜೊತೆಗೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಇಮ್ರಾನ್ ಪಾಷಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಮ್ರಾನ್ ಪಾಷಾ ಅವರನ್ನು 7 ದಿನಕ್ಕೊಮ್ಮೆ ಕೋವಿಡ್-19 ಟೆಸ್ಟ್ ಮಾಡಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ.
ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ಇಮ್ರಾನ್ ಪಾಷಾರನ್ನು ಸ್ವಾಗತ ಮಾಡಲು ಅವರ ಬೆಂಬಲಿಗರು ಆಸ್ಪತ್ರೆಯಿಂದ ಪಾದಾರಾಯನಪುರವರೆಗೂ ಸೇರಿದ್ದಾರೆ. ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ನಿಯಮಗಳನ್ನು ಬ್ರೇಕ್ ಮಾಡಿದ್ದಾರೆ. ಜೊತೆಗೆ ಇಮ್ರಾನ್ ಅವರನ್ನು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡುತ್ತಿದ್ದು, ರಸ್ತೆಯುದ್ದಕ್ಕೂ ಹೂ ಹಾಕಿ ಸ್ವಾಗತ ಮಾಡಲಾಗುತ್ತಿದೆ. ಈ ಕಾರದಿಂದ ಮೈಸೂರ್ ರೋಡ್ ಫುಲ್ ಜಾಮ್ ಆಗಿದ್ದು, ಜನ ಸಮಾನ್ಯರಿಗೆ ತೊಂದರೆಯಾಗಿದೆ.
ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಹೊರಗೆ ಬಂದ ತಕ್ಷಣ ಅವರಿಗೆ ಶಾಲು ಹಾಕಿ ಹೂಮಾಲೆಯಾಕಿ ಅವರ ಅಭಿಮಾನಿಗಳು ಬರಮಾಡಿಕೊಂಡಿದ್ದಾರೆ. ಜೊತೆಗೆ ಡಿಸ್ಚಾರ್ಜ್ ಮಾಡಿದ ತಕ್ಷಣ ಮನಸೋ ಇಚ್ಛೆ ಓಡಾಡುವಂತಿಲ್ಲ. 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿರಬೇಕು ಎಂದು ವೈದ್ಯರು ಸೂಚಿದ್ದರು, ಅವರ ಮಾತಿಗೆ ಬೆಲೆ ಕೊಡದ ಪಾಷಾ ಕೊರೋನಾ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದಂತೆ ಆಸ್ಪತ್ರೆಯಿಂದ ಬಂದ ತಕ್ಷಣ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ.
ಇಷ್ಟೇಲ್ಲ ನಿಯಮಗಳನ್ನು ಪಾಲಿಸದೇ ರಸ್ತೆಯಲ್ಲಿ ಮೆರೆವಣಿಗೆ ಮಾಡುತ್ತಿದ್ದರೂ ಅದನ್ನು ಕೇಳಲು ಸ್ಥಳದಲ್ಲಿ ಒಬ್ಬ ಪೊಲೀಸ್ ಕೂಡ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಕೊಂಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಬೈಕ್ ರ್ಯಾಲಿಯನ್ನು ತಡೆದಿದ್ದಾರೆ. ಜೊತೆಗೆ ಪಾಷಾ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿರಬಹುದು ಎಂದು ಜನರು ಹೇಳುತ್ತಿದ್ದಾರೆ.