ನವದೆಹಲಿ: ಸಿತಾರ ವಾದಕ ಪಂಡಿತ್ ದೇವಬ್ರತ ಚೌಧರಿ(85) ಕೊರೊನಾದಿಂದ ಶನಿವಾರ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ಕುರಿತಂತೆ ಅವರ ಪುತ್ರ ಪ್ರತೀಕ್ ಚೌಧರಿ, ನನ್ನ ತಂದೆ, ದಿ ಲೆಜೆಂಡ್ ಆಫ್ ಸಿತಾರ ಪಂಡಿತ್ ದೇವಬ್ರತ ಚೌಧರಿ ಇನ್ನಿಲ್ಲ. ಮರೆಗುಳಿತನ ಸಮಸ್ಯೆ ಮತ್ತು ಕೋವಿಡ್ನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮಧ್ಯರಾತ್ರಿ ಅವರನ್ನು ಐಸಿಯುನ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ನಂತರ ಅವರಿಗೆ ಹೃದಯಾಘಾತ ಸಂಭವಿಸಿದೆ. ಎಲ್ಲಾ ರೀತಿಯ ಪ್ರಾರ್ಥನೆ ಮತ್ತು ಪ್ರಯತ್ನಗಳ ಬಳಿಕವೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ನಂತರ ಪಂಡಿತ್ ಚೌಧರಿಯವರನ್ನು ವಾರದ ಆರಂಭದಲ್ಲಿ ದೆಹಲಿಯ ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಸಂಜೆ ಉಸಿರಾಟದ ಸಮಸ್ಯೆಯುಂಟಾಗಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಚಿಕಿತ್ಸೆ ಫಲಾಕಾರಿಯಾಗದೇ ಶನಿವಾರ ಮುಂಜಾನೆ ಕೊನೆಯುಸಿರೆಳೆದರು.
ಪಂಡಿತ್ ದೇವಬ್ರತ ಚೌಧರಿಯವರು ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ ಜೊತೆಗೆ ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗೆ ಸಂಗೀತ ನಾಟಕ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ.