ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತಗಳು ಸೃಷ್ಟಿಯಾಗಿತ್ತು. ಕಾವೇರಿ, ಲಕ್ಷ್ಮಣ ತೀರ್ಥ, ಕೊಟ್ಟೂರು ಹೊಳೆ ಸೇರಿದಂತೆ ಹಲವು ನದಿಗಳ ಪ್ರವಾಹದ ನೀರು ನುಗ್ಗಿದ್ದರಿಂದ ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿ ಬೆಳೆ ಹಾಳಾಗಿದೆ. ಭತ್ತ ನಾಟಿ ಮಾಡಿದ್ದ ಗದ್ದೆಗಳಲ್ಲಿ ನಾಲ್ಕೈದು ದಿನಗಳ ಕಾಲ ಭಾರೀ ಪ್ರಮಾಣದ ನೀರು ಹರಿದಿದ್ದರಿಂದ ಭತ್ತದ ಬೆಳೆ ಕೊಚ್ಚಿಹೋಗಿದೆ.
ಇನ್ನು ಹಲವೆಡೆ ಭೂಕುಸಿತದ ಮಣ್ಣು ಬೆಳೆದ ಬೆಳೆಗಳ ಮೇಲೆ ಸಾವಿರಾರು ಟನ್ ಗಳಷ್ಟು ಕಲ್ಲು ಮಣ್ಣು ಬಂದು ನಿಂತಿದೆ. ಹೀಗಾಗಿ ಬೆಳೆಯಷ್ಟೇ ಅಲ್ಲ ಹೊಲಗದ್ದೆಗಳೇ ನಾಶವಾಗಿವೆ. ಒಂದು ವರ್ಷವಲ್ಲ ಮುಂದಿನ ವರ್ಷವೂ ಅವುಗಳಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಬರೋಬ್ಬರಿ 34 ಸಾವಿರ ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದೆ.
ಸರ್ಕಾರದ ನಿಯಮದ ಪ್ರಕಾರ ಹೆಕ್ಟೇರ್ ಗೆ 12 ಸಾವಿರ ಮಾತ್ರವೇ ಪರಿಹಾರ ನೀಡಲು ಅವಕಾಶ ಇದೆ. ಆದರೆ ರೈತರು ಒಂದು ವರ್ಷಕ್ಕೆ ಅದೇ ಒಂದು ಹೆಕ್ಟೇರ್ ಪ್ರದೇಶದಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದರು. ಒಟ್ಟಿನಲ್ಲಿ ಆಶ್ಲೇಷ ಮಳೆಗೆ ಜಿಲ್ಲೆಯಲ್ಲಿ ಎದುರಾದ ಭೂಕುಸಿತ ಮತ್ತು ಪ್ರವಾಹಕ್ಕೆ ಜಿಲ್ಲೆಯ ಸಾವಿರಾರು ರೈತರು ಕಂಗಾಲಾಗಿದ್ದಾರೆ.