ಮಡಿಕೇರಿ: ಕೊಡಗು ಹಾಸನ ಗಡಿ ಭಾಗದ ಗ್ರಾಮೀಣ ಭಾಗದಲ್ಲಿ ಇಂದು ಆಲಿಕಲ್ಲು ಸಹಿತ ಧಾರಕಾರ ಮಳೆಯಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಸುತ್ತಮುತ್ತ ಮಳೆಯಾಗಿದ್ದು, ಸಮೀಪದ ಅಂಕನಹಳ್ಳಿಯಲ್ಲಿ ರಾಶಿ ರಾಶಿ ಆಲಿಕಲ್ಲು ಮಳೆ ಸುರಿದಿದೆ. ಇದನ್ನು ಕಂಡ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.
ಅಂಕನ ಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಸುರಿದ ಆಲಿಕಲ್ಲು ಮಳೆಗೆ ಗ್ರಾಮದಲ್ಲಿ ರೈತರು ಬೆಳೆದ ಕಾಫಿ, ಹಸಿ ಮೆಣಸು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದೆ. ಇದರಿಂದ ಈ ಭಾಗದ ರೈತರು ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ.
ಕೋಡ್ಲಿಪೇಟೆ ಸುತ್ತಮುತ್ತ ಆಲಿಕಲ್ಲು ಸಹಿತ ಆರಂಭವಾದ ಮಳೆ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು. ಕಳೆದ ಕೆಲ ದಿನಗಳಿಂದ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ಮಳೆರಾಯನ ದರ್ಶನದಿಂದ ಮೈ ಮನಸ್ಸು ತಂಪಾದಂತಾಯಿತು.