ಬಿಗ್ಬಾಸ್ ಮನೆಯಲ್ಲಿ ನಿನ್ನೆ ಮತ್ತೆ ಅಡುಗೆ ಮನೆಯ ಕಿಚ್ಚು ಹತ್ತಿಕೊಂಡಿದೆ. ತುಪ್ಪ, ಚಪಾತಿ ಬಳಿಕ ಮೊಟ್ಟೆಗಾಗಿ ಒಂಟಿ ಮನೆಯಲ್ಲಿ ಪ್ರಶಾಂತ್ ಸಂಬರಗಿ ಜಗಳ ಮಾಡಿಕೊಂಡಿದ್ದಾರೆ. ಈ ಜಗಳ ನಿಧಿ ಮತ್ತು ಪ್ರಶಾಂತ್ ನಡುವೆ ವಿಕೋಪಕ್ಕೆ ತಿರುಗಿತ್ತು. ಜಗಳದಲ್ಲಿ ವೈಯಕ್ತಿಕ ವಿಷಯಗಳನ್ನ ತಂದಿದ್ದಕ್ಕೆ ನೊಂದ ಪಂಚರಂಗಿ ಚೆಲುವೆ ಗಳಗಳನೇ ಕಣ್ಣೀರಿಟ್ಟರು. ಈ ವೇಳೆ ಕೊಚ್ಚೆ ಮೇಲೆ ಯಾಕೆ ಕಲ್ಲು ಹಾಕೋದು ಸುಮ್ಮನಾಗು ಅಂತ ನಿಧಿಗೆ ಮಂಜು ಸಲಹೆ ನೀಡಿದರು.
ಗ್ಯಾಸ್ ಇಲ್ಲದ ಕಾರಣ ಓವನ್ ನಲ್ಲಿಯೇ ಮನೆ ಮಂದಿ ಮೊಟ್ಟೆ ಬೇಯಿಸಿಕೊಳ್ತಿದ್ದರು. ಪ್ರಶಾಂತ್ ಓವನ್ ನಲ್ಲಿ ಮೊಟ್ಟೆ ಬೇಯಿಸಿ ತಿಂದು, ಮತ್ತೆ ಮತ್ತೊಂದು ತೆಗೆದುಕೊಂಡಿದ್ದಕ್ಕೆ ನಿಧಿ ಬೇಸರ ಹೊರ ಹಾಕಿದರು. ಆದ್ರೆ ಕೋಪದಲ್ಲಿದ್ದ ಪ್ರಶಾಂತ್ ವೈಯಕ್ತಿಕ ವಿಚಾರಗಳನ್ನ ಎಳೆದು ತಂದಿದ್ದಕ್ಕೆ ಇಡೀ ಮನೆಯ ಸದಸ್ಯರು ಅಸಮಾಧಾನ ಹೊರ ಹಾಕಿದರು. ದಿವ್ಯಾ ಉರುಡುಗ, ರಾಜೀವ್, ಶುಭಾ, ಅರವಿಂದ್, ಚಕ್ರವರ್ತಿ ಎಲ್ಲ ಪ್ರಶಾಂತ್ ಸಂಬರಗಿ ಮೊಟ್ಟೆ ವಿಚಾರವನ್ನ ಮಾತಾಡಿ ಅಂತ ತಿಳಿ ಹೇಳಲು ಮುಂದಾದರು. ಆದ್ರೆ ಪ್ರಶಾಂತ್ ಸಂಬರಗಿ ತಮ್ಮ ಮಾತುಗಳನ್ನ ಸಮರ್ಥಿಸಿಕೊಂಡ್ರು. ಇತ್ತ ಕಣ್ಣೀರು ಹಾಕುತ್ತಿದ್ದ ನಿಧಿಗೆ ಎಲ್ಲರೂ ಸಮಾಧಾನ ಹೇಳಿದರು.
ಈ ಘಟನೆ ನಡೆದ ಬಳಿಕವೂ ಗಾರ್ಡನ್ ಏರಿಯಾದಲ್ಲಿ ಮೊಟ್ಟೆ ವಿಷಯದ ಕುರಿತು ನಿಧಿ, ದಿವ್ಯಾ ಸುರೇಶ್ ಮತ್ತು ಮಂಜು ಮಾತನಾಡಿಕೊಳ್ಳುತ್ತಿದ್ದರು. ಯಾರೋ ಚೀಪ್ ಅಂದಾಕ್ಷಣ ನೀನು ಚೀಪ್ ಅಲ್ಲ. ನೋಡೋರಿಗೆ ಯಾರು ಚೀಪ್ ಅನ್ನೋದು ಗೊತ್ತಾಗುತ್ತೆ. ಕೊಚ್ಚೆ ಮೇಲೆ ಕಲ್ಲು ಯಾಕೆ ಹಾಕೋದು ಅಂತ ನಿಧಿಗೆ ಮಂಜು ಸಲಹೆ ನೀಡಿದರು. ಮಂಜು ಮಾತು ಕೇಳಿದ ನಿಧಿ ಹೌದು ಅನ್ನುವಂತೆ ತಲೆ ಆಡಿಸಿದ್ರು.