ನವದೆಹಲಿ: ದೇಶದಲ್ಲಿ ಕೊರೊನಾ ಸಂಕಷ್ಟದಿಂದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ಮೌಲ್ಯದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಎರಡು ಹಂತದಲ್ಲಿ ಈ ಪ್ಯಾಕೇಜ್ ಹಂಚಿಕೆ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೊನೆಯ ಹಂತವಾಗಿ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.
ಇಂದಿನ ಪ್ಯಾಕೇಜ್ ಸುಮಾರು 3.5 ಲಕ್ಷ ಕೋಟಿ ಮೌಲ್ಯದ್ದು ಇರಲಿದೆ ಎನ್ನಲಾಗಿದ್ದು, ದೊಡ್ಡ ಹಿಡುವಳಿ ಕೃಷಿಕರು, ಪ್ರವಾಸೋದ್ಯಮ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬಹುದು. ಇಲ್ಲದೇ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬಹುದು ಎನ್ನಲಾಗುತ್ತಿದೆ.
ಕೊರೊನಾ ಭೀತಿಯಿಂದ ಚೀನಾದಿಂದ ವಿದೇಶ ಕಂಪನಿಗಳು ಸ್ಥಳಾಂತರಗೊಳ್ಳುತ್ತಿದ್ದು, ಇವುಗಳನ್ನು ಸೆಳೆಯಲು ವಿದೇಶಿ ಹೂಡಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಬದಲಾವಣೆ ಹಾಗೂ ಪ್ಯಾಕೇಜ್ ಕೆಲ ಭಾಗ ಹಂಚಿಕೆಯಾಗಬಹುದು ಎಂದು ಮೂಲಗಳು ಹೇಳಿವೆ. ಇಂದು ಸಂಜೆ 4 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಹಂತದ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಇದರಲ್ಲಿ ಆತಿಥ್ಯ ಉದ್ಯಮಕ್ಕೂ ಪರಿಹಾರ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.
ನಿರ್ಮಲಾ ಸೀತಾರಾಮನ್ ಮೊದಲ ಹಂತದ ಪ್ಯಾಕೇಜ್ ನಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಗೆಗಳಿಗೆ ಆರು ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್, ಎರಡನೇ ಹಂತದಲ್ಲಿ ರೈತರು ಕೃಷಿ ವಲಸೆ ಕಾರ್ಮಿಕರಿಗೆ ಸುಮಾರು ನಾಲ್ಕು ಲಕ್ಷ ಕೋಟಿ ಘೋಷಣೆ ಮಾಡಿದ್ದರು. ಇದಕ್ಕೂ ಮುನ್ನ ಕೇಂದ್ರ ಸರ್ಕಾರ 1.75 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿತ್ತು. ಆರ್.ಬಿ.ಐ ಸುಮಾರು ಐದು ಲಕ್ಷ ಕೋಟಿ ಮೌಲ್ಯದ ವಿವಿಧ ಹಂತದಲ್ಲಿ ವಿನಾಯತಿಗಳು ನೀಡಿತ್ತು. ಈ ಎಲ್ಲ ಅಂಶಗಳು 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ಒಳಗೊಂಡಿದ್ದು ಸದ್ಯ 3.5 ಲಕ್ಷ ಕೋಟಿ ಬಾಕಿ ಉಳಿದುಕೊಂಡಿದ್ದ ಇಂದು ಕೊನೆಯ ಹಂತದಲ್ಲಿ ಸಂಜೆ 4 ಗಂಟೆಗೆ ಬಿಡುಗಡೆ ಮಾಡಬಹುದು.