– ಇಬ್ಬರು ಮೃತದೇಹ ಪತ್ತೆ, ಉಳಿದ ಇಬ್ಬರಿಗಾಗಿ ಶೋಧ
ಚಿಕ್ಕಬಳ್ಳಾಪುರ: ಕುಂಟೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಜ್ಜವಾರಪಲ್ಲಿ ಗ್ರಾಮದಲ್ಲಿ ನಡೆದಿದೆ.
ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹಕ್ಕಾಗಿ ಆಗ್ನಿ ಶಾಮಕದಳ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ. ಮೃತರು ಸಾಲಮಾಕಲಹಳ್ಳಿಯ 13 ವರ್ಷದ ಬದ್ರೀನಾಥ್ ಹಾಗೂ ಆಂಧ್ರಪ್ರದೇಶ ವದ್ದಿವಾಂಡ್ಲಪಲ್ಲಿಯ ವರುಣ್ ಮೃತರು ಅಂತ ತಿಳಿದುಬಂದಿದೆ. ಪತ್ತೆಯಾಗಬೇಕಾದ ಮಹೇಶ್ ಹಾಗೂ ಸಂತೋಷ್ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಕುಂಟೆಯ ಮೇಲ್ಭಾಗದ ದಡದಲ್ಲಿ ನಾಲ್ವರು ಬಟ್ಟೆಗಳು ಪತ್ತೆಯಾಗಿವೆ. ದಡದ ಮೇಲೆ ಬಟ್ಟೆಗಳು ಹಾಗೂ ಕುಂಟೆಯಲ್ಲಿ ಓರ್ವ ಬಾಲಕನ ಮೃತದೇಹ ತೇಲಾಡುತ್ತಿದ್ದನ್ನು ಕಂಡು ಪ್ರಕರಣ ಬೆಳಕಿಗೆ ಬಂದಿದೆ. ಅಂದಹಾಗೆ ಊದವಾರಪಲ್ಲಿಯ ಅನಸೂಯಮ್ಮನವರ ಮನೆಗೆ ತವರು ಮನೆಯಿಂದ ಶಾಲೆಗಳಿಗೆ ರಜೆ ಇದ್ದ ಕಾರಣ ಸಂಬಂಧಿಗಳಾದ ವರುಣ್, ಸಂತೋಷ್ ಹಾಗೂ ಆಂಧ್ರದ ವದ್ದಿವಾಂಡ್ಲಪಲ್ಲಿಯ ಬದ್ರೀನಾಥ್ ಬಂದಿದ್ದರು.
ಈ ವೇಳೆ ಅನಸೂಯಮ್ಮನ ಮಗ ಮಹೇಶ್ ಜೊತೆ ಸೇರಿ ನಾಲ್ವರು ಹಸು ಕರೆದುಕೊಂಡು ತೋಟದ ಬಳಿ ಹೋಗಿದ್ದಾರೆ. ಈ ವೇಳೆ ಹಸು ಕಟ್ಟಿ ಹಾಕಿ ನಾಲ್ವರು ಕುಂಟೆಯಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ. ಈ ಸಂಬಂಧ ಸದ್ಯ ಆಗ್ನಿಶಾಮಕ ದಳ ಸಿಬ್ಬಂದಿ ಕುಂಟೆ ನೀರನ್ನು ಹೊರ ಹಾಕಿ ಉಳಿದ ಇಬ್ಬರ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಲಿದ್ದಾರೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಕುಂಟೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ