– ಪೋಷಕರನ್ನು ಕರೆತಂದ್ರೂ ಶರಣಾಗದ ಉಗ್ರರು
ಶ್ರೀನಗರ: ಜಮ್ಮು-ಕಾಶ್ಮೀರದ ಖಾದಿಬಾಲ್ ಸೌರಾ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾದಿಬಾಲ್ ಸೌರಾ ಪ್ರದೇಶದ ಮನೆಯೊಳಗೆ ಭಯೋತ್ಪಾದಕರು ಅವಿತು ಕುಳಿತಿದ್ದರು. ಆಗ ಭಾರತೀಯ ಸೇನೆ ಆ ಮನೆಯ ಬಳಿ ತೆರಳಿ ಶರಣಾಗುವಂತೆ ಹೇಳಿದರೂ ಭಯೋತ್ಪಾದಕರು ನಿರಾಕರಿಸಿದ್ದಾರೆ. ಇದರಿಂದ ಗುಂಡಿನ ಚಕಮಕಿ ಶುರುವಾಗಿ ಉಗ್ರರು ಹತರಾಗಿದ್ದಾರೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ಅಧಿಕಾರಿಗಳು, 2019 ರಿಂದ ಈ ಮೂವರು ಭಯೋತ್ಪಾದಕರು ಉಗ್ರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಈ ಮೂವರಲ್ಲಿ ಒಬ್ಬರು ಕಳೆದ ತಿಂಗಳು ಇಬ್ಬರು ಬಿಎಸ್ಎಫ್ ಜವಾನರ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದರು. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಬೆಳಗ್ಗೆಯಿಂದ ಉಗ್ರರನ್ನು ಹುಡುಕು ಕೆಲಸದಲ್ಲಿ ಸೇನೆ ತೊಡಗಿತ್ತು. ಈ ವೇಳೆ ಮನೆಯಲ್ಲಿ ಉಗ್ರರು ಅವಿತು ಕಳಿತಿದ್ದರು. ಆಗ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ಮನೆಯಲ್ಲಿ ಉಗ್ರರು ಇರುವುದನ್ನು ಮನಗಂಡ ಸೇನೆ ಅವರನ್ನು ಶರಣಾಗುವಂತೆ ಹೇಳಿತ್ತು. ಜೊತೆಗೆ ಸ್ಥಳಕ್ಕೆ ಉಗ್ರರ ಪೋಷಕರನ್ನು ಕರೆಸಿ ಶರಣಾಗಿ ಎಂದು ಸೇನೆ ಹೇಳಿತ್ತು. ಆದರೆ ಅವರು ಇದಕ್ಕೆ ಒಪ್ಪದೆ ಸೇನೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಸೇನೆ ಪ್ರತಿ ದಾಳಿ ಮಾಡಿದ್ದು, ಮನೆಯಲ್ಲಿದ್ದ ಮೂವರು ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.