ಶಿವಮೊಗ್ಗ: ಮಥುರಾ ಹಾಗೂ ಕಾಶಿಯಲ್ಲಿ ಮಂದಿರ ನಿರ್ಮಿಸುವ ವಿಷಯದಲ್ಲಿ ಬಂಧಿಸುವುದಾದರೆ ನಾನು ನೂರು ಬಾರಿ ಜೈಲಿಗೆ ಹೋಗಲು ಸಿದ್ಧವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಭೂಮಿ ಪೂಜೆ ನೆರವೇರಿಸಿದ್ದು, ಈಡಿ ವಿಶ್ವವೇ ಸಂತಸ ಪಡುವ ದಿನ. ಈ ವೇಳೆ ನಾನು ಕಾಶಿ ಮತ್ತು ಮಥುರಾದಲ್ಲಿ ಮಸೀದಿ ತೆರವುಗೊಳಿಸಿ ದೇಗುಲ ನಿರ್ಮಿಸಬೇಕೆಂಬ ಎಂಬ ಹೇಳಿಕೆ ನೀಡಿದ್ದು, ಅದು ನನ್ನ ಮನಸ್ಸಿನ ಭಾವನೆ. ಆದರೆ ನನ್ನ ಹೇಳಿಕೆಯನ್ನು ಹೈದರಾಬಾದ್ನ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧಿಸುವ ಮೂಲಕ ರಾಜಕಾರಣ ಮಾಡಲು ಹೊರಟ್ಟಿದ್ದಾರೆ ಎಂದರು.
ನಾನು ಅಂದು ಅನೇಕ ಹಿಂದೂಗಳ ಭಾವನೆಯ ಪ್ರತಿನಿಧಿಯಾಗಿ ಹಾಗೂ ನನ್ನ ಸ್ವಂತ ಅನಿಸಿಕೆಯನ್ನು ಮಾಧ್ಯಮದ ಮೂಲಕ ನಾಡಿನ ಜನತೆಗೆ ವ್ಯಕ್ತಪಡಿಸಿದ್ದೇನೆ. ಡಿಕೆಶಿಯವರು ರಾಜಕೀಯ ಮಾಡುವ ಮೂಲಕ ನನ್ನನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಹೇಳಿದ್ದಾರೆ. ಮಥುರಾ ಹಾಗೂ ಕಾಶಿಯಲ್ಲಿ ಮಂದಿರ ನಿರ್ಮಿಸುವ ವಿಷಯದಲ್ಲಿ ಬಂಧಿಸುವುದಾದರೆ ನಾನು ನೂರು ಬಾರಿ ಜೈಲಿಗೆ ಹೋಗಲು ಸಿದ್ಧವೆಂದು ಹೇಳಿದರು.
ನಾನು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ. ನಾನು ನನ್ನ ಮನಸ್ಸಿನ ಭಾವನೆಯನ್ನ ತಿಳಿಸಿದ್ದೇನೆ. ಆದರೆ ಸಂಸದ ಓವೈಸಿಯವರು, ಈಶ್ವರಪ್ಪನವರ ಹೇಳಿಕೆ ಹಿಂದೆ ಆರ್ಎಸ್ಎಸ್ ಇದೆ. ಆರ್ಎಸ್ಎಸ್ ನಾಳೆ ಇದನ್ನು ಆಂದೋಲನದ ರೀತಿ ಧರ್ಮ ಸಂಸತ್ ನಡೆಸಿ ಕಾನೂನು ಬದಲಾವಣೆ ತಂದು, ದೇಗುಲ ನಿರ್ಮಿಸಿ ಜನರ ಭಾವನೆಯೊಂದಿಗೆ ಆಟವಾಡುತ್ತಾರೆ ಎಂದು ಹೇಳಿದ್ದಾರೆ. ನನ್ನ ದೇಹದಲ್ಲಿ ಆಆರ್ಎಸ್ಎಸ್ ರಕ್ತ ಇದೆ ನಿಜ. ನಾನು ಇನ್ನೊಬ್ಬರ ಮಾತು ಕೇಳಿ ಮಾತನಾಡುವವನಲ್ಲ. ಆದರೆ ಆ ದಿನ ನಾನು ನನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದರು.
ಧಾರ್ಮಿಕ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದನ್ನು ಬಿಡಬೇಕು. ಮುಸಲ್ಮಾನರ ಓಲೈಕೆಗೆ ಡಿಕೆಶಿಯವರು ನನ್ನ ಹೇಳಿಕೆ ವಿರೋಧಿಸಿದ್ದಾರೆ. ನನ್ನ ಹೇಳಿಕೆಯಿಂದ ಮುಸಲ್ಮಾನ್ರ ಮತ ಬ್ಯಾಂಕ್ ಹೋಗುವುದಾದರೆ ಹೋಗಲಿ ಎಂದು ಸಚಿವ ಈಶ್ವರಪ್ಪ ಹೇಳಿದರು.