– ಮನೆಗಳಿಗೆ ನುಗ್ಗಿದ ನೀರು
ಮಂಗಳೂರು: ಜಿಲ್ಲೆಯಲ್ಲಿ ಸುರಿದ ಮಳೆಗೆ ಉಳ್ಳಾಲ ನಗರ ವ್ಯಾಪ್ತಿಯ ಬಂಗೇರ ಲೇನ್ನ ಅನೂಪ್ ಎಂಬವರ ಮನೆ ಆವರಣದ ಗೋಡೆ ಕುಸಿದು ಕಾಲುವೆಗೆ ಬಿದ್ದಿದೆ. ಪರಿಣಾಮ ಕಾಲುವೆ ಉಕ್ಕಿ ಹರಿದು ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ.
ಭಾರೀ ಮಳೆಗೆ ಕಾಲುವೆಯ ಅಂಚಿನಲ್ಲಿರುವ ಅನೂಪ್ ಅವರ ಮನೆ ಆವರಣ ಗೋಡೆ ಕುಸಿದಿದ್ದಲ್ಲದೆ ಮನೆಯೂ ಅಪಾಯದಂಚಿನಲ್ಲಿದೆ. ಕಾಲುವೆಗೆ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ನೀರು ಉಕ್ಕಿ ಹರಿದು ಹತ್ತಿರದ ಮನೆಗಳಿಗೆ ನುಗ್ಗಿದ್ದು ಸ್ಥಳೀಯರು ಸಂಕಷ್ಟ ಅನುಭವಿಸುವಂತಾಗಿದೆ.
ಸ್ಥಳದಲ್ಲಿ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಮತ್ತು ಸ್ಥಳೀಯ ಕೌನ್ಸಿಲರ್ ನಮಿತಾ ಗಟ್ಟಿ ಅವರು ಮೊಕ್ಕಾಂ ಹೂಡಿದ್ದು ಜೆಸಿಬಿ ಯಂತ್ರದ ಮೂಲಕ ಕಾಲುವೆಯಲ್ಲಿ ಬಿದ್ದಿರುವ ಕಲ್ಲುಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.