– ಶೆಡ್ ಒಳಗಡೆ ನುಗ್ಗಲು ಯತ್ನಿಸಿದ ಆನೆ
– ಬೊಗಳುತ್ತಲೇ ಕಾಡಿಗೆ ಕಳಿಸುವಲ್ಲಿ ಶ್ವಾನ ಯಶಸ್ವಿ
ತಿರುವನಂತಪುರಂ: ಶ್ವಾನವೊಂದು ಒಂದೇ ಕುಟುಂಬದ 9 ಮಂದಿಯನ್ನು ಕಾಡಾನೆ ದಾಳಿಯಿಂದ ರಕ್ಷಿಸಿದ ಘಟನೆ ಕೇರಳದಲ್ಲಿ ನಡೆದಿದೆ.
ಉದಿರಂಕುಲಂನ ಸುಂದರ್ ಅವರ ಶೆಡ್ ಹತ್ತಿರ ಆನೆಯೊಂದು ಬಂದಿದೆ. ಈ ವೇಳೆ ಆನೆಯನ್ನು ಕಂಡ ಸಾಕು ನಾಯಿ ಜಿಮ್ಮಿ ಜೋರಾಗಿ ಬೊಗಳಿದ್ದು, ಮಾತ್ರವಲ್ಲದೆ ಶೆಡ್ ನ ಶೀಟ್ ಎಳೆಯುವ ಮೂಲಕ ಮನೆ ಮಂದಿಯನ್ನು ಜಾಗೃತರನ್ನಾಗಿಸಿ, ಆನೆ ಬಂದಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಇದರಿಂದ ಎಚ್ಚೆತ್ತುಕೊಂಡ ಮನೆಯವರು ಆನೆ ದಾಳಿಯಿಂದ ತಪ್ಪಿಸಿಕೊಳ್ಳುವ ಮೂಲಕ ಭಾರೀ ಅವಘಡದಿಂದ ಪಾರಾಗಿದ್ದಾರೆ.
ಕರಿಮುರಿಯಂ ಅರಣ್ಯ ಪ್ರದೇಶದಲ ಶೆಡ್ ನಲ್ಲಿ ಸುಂದರನ್ ಅವರ 9 ಮಂದಿಯ ಕುಟುಂಬ ವಾಸವಾಗಿತ್ತು. ಸುಂದರನ್ ಹಾಗೂ ಅವರ ಪತ್ನಿ ಸೀತಾ ಶೆಡ್ನ ಅಡುಗೆ ಮನೆಯಲ್ಲಿ ಮಲಗಿದ್ದರು. ಹೀಗೆ ಮಲಗಿದ್ದಾಗ ನಾಯಿ ಜೋರಾಗಿ ಬೊಗಳಲು ಆರಂಭಿಸಿದೆ. ಕೂಡಲೇ ಅವರು ಎದ್ದು ನೋಡಿದಾಗ ಆನೆ ತನ್ನ ಸೊಂಡಿಲಿನಲ್ಲಿ ಶೆಡ್ ಅನ್ನು ನೂಕುತ್ತಿತ್ತು. ಕೂಡಲೇ ಗಾಬರಿಗೊಂಡ ಪತಿ, ಪತ್ನಿ ಮಲಗಿದ್ದ ತಮ್ಮ ಮಕ್ಕಳನ್ನು ಎಬ್ಬಿಸಿದ್ದಾರೆ.
ಅಷ್ಟರಲ್ಲಿ ಕಾಡಾನೆ ಅವರ ಶೆಡ್ ನ ಛಾವಣಿಯನ್ನು ನಾಶಮಾಡಿ ಒಳಗಡೆ ನುಗ್ಗಲು ಪ್ರಯತ್ನಿಸುತ್ತಿತ್ತು. ಇದರಿಂದ ಮತ್ತಷ್ಟು ಗಾಬರಿಗೊಂಡ ಕುಟುಂಬ ಜೋರಾಗಿ ಕಿರುಚಲು ಆರಂಭಿಸಿದೆ. ಹೀಗಾಗಿ ಮನೆಯೊಳಗಡೆ ನುಗ್ಗುವ ಆನೆ ಪ್ರಯತ್ನ ವಿಫಲವಾಯಿತು. ಬಳಿಕ ಸುಮಾರು 10 ನಿಮಿಷ ಆನೆ ಅನೇಕ ಬಾರಿ ಅವರ ಮನೆಯ ಸುತ್ತಲೂ ಒಡಾಟ ನಡೆಸಿದೆ. ನಂತರ ಚೆಂಬಂಕೊಲ್ಲಿ ರಸ್ತೆಯ ಮೂಲಕ ಅರಣ್ಯದ ಕಡೆ ಹೆಜ್ಜೆ ಹಾಕಿತು. ಅಲ್ಲಿವರೆಗೆ ಜಿಮ್ಮಿ ಬೊಗಳುತ್ತಾನೆ ಇತ್ತು. ಈ ಮೂಲಕ ಕಾಡಾನೆಯನ್ನು ಕಾಡಿಗೆ ವಾಪಸ್ ಕಳಿಸುವಲ್ಲಿ ಜಿಮ್ಮಿ ಯಶಸ್ವಿಯಾಯಿತು.
ಇದೇ ಮೊದಲ ಬಾರಿಗೆ ಸುಂದರನ್ ಅವರ ಮನೆಗೆ ಕಾಡಾನೆ ಬಂದಿದ್ದಾಗಿದೆ. ಕಾಡಾನೆ ಹಿಂದಿರುಗುವ ಮುನ್ನ ಸುಂದರನ್ ಅವರ ಭತ್ತ, ಬಾಳೆ ಮತ್ತು ತೆಂಗಿನ ಮರ ಮೊದಲಾದ ಬೆಳೆಗಳನ್ನು ನಾಶಪಡಿಸಿತ್ತು.