ಹಾವೇರಿ: ಕಾಂಗ್ರೆಸ್ಸಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರೂ ಸಿಗುತ್ತಿಲ್ಲ. ಹೀಗಾಗಿ ಹಾಳೂರಿಗೆ ಉಳಿದವನೆ ಗೌಡ ಅನ್ನೋ ಪರಿಸ್ಥಿತಿ ಕಾಂಗ್ರೆಸ್ಸಿನದ್ದಾಗಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನ ಬಿಟ್ಟರೆ ಇವರು, ಇವರನ್ನ ಬಿಟ್ಟರೆ ಅವರು ಅನ್ನೋ ಹಾಗಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಗ್ರಾಮದ ಬಳಿ ಮಾತನಾಡಿದ ಅವರು, ಗಾಂಧಿ ಕುಟುಂಬ ಬಿಟ್ಟು ಹೊಸಬರಿಗೆ ಕೊಟ್ಟರೆ ಕಾಂಗ್ರೆಸ್ ಉಳಿಯುತ್ತೆ ಅಂತ ಹಿರಿಯ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ಸಿನವರು ಗಾಂಧಿ ಫ್ಯಾಮಿಲಿ ಬಿಡೋಲ್ಲ ಅಂತ ಗೊತ್ತಾದ ಮೇಲೆ ನಾವು ಆ ಪಕ್ಷ ಬಿಟ್ಟು ಹೊರಗಡೆ ಬಂದಿದ್ದು. ಆ ಪಕ್ಷಕ್ಕೆ ಉಳಿಗಾಲವಿಲ್ಲ, ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷರನ್ನ ಆಯ್ಕೆ ಮಾಡೋಕೆ ಆಗದ ದುಃಸ್ಥಿತಿ ಬಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ನಿಲ್ಲುವುದಕ್ಕೆ ಆಗೋದಿಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯನವರನ್ನು ಮಾಡಲಿ, ಯಾರನ್ನಾದರೂ ಮಾಡಲಿ, ಅದು ಕಾಂಗ್ರೆಸ್ಗೆ ಬಿಟ್ಟ ವಿಚಾರ. ನಮ್ಮ ಪಕ್ಷದ ಬಗ್ಗೆ ನಾವು ಯೋಚನೆ ಮಾಡುತ್ತೇವೆ ಎಂದು ಹೇಳಿದರು.
ಅಣ್ಣಾಮಲೈ ಬಿಜೆಪಿ ಸೇರ್ಪಡೆಗೆ ಸಂತೋಷವಾಗಿದೆ. ಒಳ್ಳೆಯ ಅಧಿಕಾರಿ, ಒಳ್ಳೆಯ ಮನಸ್ಸುಳ್ಳವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೀವಿ. ಮುಂದಿನ ದಿನಗಳಲ್ಲಿ ಬಹಳ ಜನಕ್ಕೆ ಸ್ವಾಗತ ಮಾಡುತ್ತೇವೆ ಎಂದು ಅಣ್ಣಾಮಲೈ ಬಿಜೆಪಿ ಸೇರ್ಪಡೆಯ ಬಗ್ಗೆ ಬಿ.ಸಿ.ಪಾಟೀಲ್ ಮಾತನಾಡಿದರು.