ಬಳ್ಳಾರಿ: ಕರ್ನಾಟಕ- ಆಂಧ್ರ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿ ಗ್ರಾಮದ ಬಯಲು ಭೂಮಿಯಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನ ಕಾರ್ಯಾಗಾರ ನಡೆದಿದೆ ಭರ್ಜರಿಯಾಗಿ ನಡೆದಿದೆ.
ಬೆಂಗಳೂರಿನ ಯಲಹಂಕ ಏರ್ ಪೋರ್ಟ್ ನಿಂದ ಮಂಗಳವಾರ ಎರಡು ವಿಶೇಷ ವಿಮಾನದ ಮೂಲಕ 3,000 ಜನ ಯೋಧರು ಆಗಮಿಸಿದ್ದು, ಇಂದು ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಪ್ಯಾರಾಚೂಟ್ನಲ್ಲಿ ಹಾರುವ ಮೂಲಕ ಚೆಳ್ಳಗುರ್ಕಿ ಬಯಲು ಭೂಮಿಯಲ್ಲಿ ಇಳಿದು ನಾನಾ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಸುಮಾರು 3,000ಕ್ಕೂ ಅಧಿಕ ಜನರ ಪ್ಯಾರಾ ಮಿಲಿಟರಿ ಪಡೆ ಪಾಲ್ಗೊಂಡಿದ್ದು, ಸುಮಾರು 1200-1400 ಅಡಿ ಎತ್ತರದಿಂದ ನೆಲಕ್ಕೆ ಹಾರಿದ್ದಾರೆ. ವಿವಿಧ ಬಗೆಯ ವಾತಾವರಣದಲ್ಲಿ ಹಾಗೂ ಭೂ ಪ್ರದೇಶದಲ್ಲಿ ಈ ರೀತಿಯಲ್ಲಿ ತಾಲೀಮು ನಡೆಸುವುದರಿಂದ ಯುದ್ಧಕಾಲದಲ್ಲಿ ಯಾವುದೇ ಸನ್ನಿವೇಶವನ್ನು ಸೈನಿಕರು ಎದುರಿಸಲು ಸದಾ ಸಿದ್ಧರಾಗಿರುವ ರೀತಿ ತರಬೇತಿ ನೀಡಲಾಗುತ್ತದೆ.
ಯುದ್ಧದ ಸನ್ನಿವೇಶಗಳನ್ನು ಎದುರಿಸಲು ಈ ರೀತಿಯ ತಾಲೀಮು ಅವಶ್ಯವಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸೇನಾ ತರಬೇತಿ ಕಾರ್ಯಾಗಾರವನ್ನು ನೋಡಲು ಸಾಮಾನ್ಯ ಜನರಿಗೆ ಅವಕಾಶ ನೀಡಿರಲಿಲ್ಲ, ಹೀಗಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ಯಾರಾ ಮಿಲಿಟರಿ ಪಡೆ ತರಬೇತಿ ಕಾರ್ಯಾಗಾರಕ್ಕೆ ಸೂಕ್ತ ಭದ್ರತೆಯನ್ನ ಒದಗಿಸಲಾಗಿತ್ತು.