ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸಂಜೆಯಿಂದ ಸುರಿದ ಅಬ್ಬರದ ಮಳೆಯಿಂದಾಗಿ ಜಿಲ್ಲೆಯ ಕುಮಟಾ ಪಟ್ಟಣ ಹಾಗೂ ಮಾಸ್ತಿ ಕಟ್ಟಾ ಭಾಗದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರರು ಪರೆದಾಡುವಂತಾಗಿದೆ. ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ತುಂಬಿ ಜನರು ಓಡಾಡುವುದಕ್ಕೂ ಕಷ್ಟವಾಗಿದೆ.
ಕುಮಟಾ ತಾಲೂಕಿನ ಹೆರವಟ್ಟಾ ಗ್ರಾಮದ ಸಾಣಿಯಮ್ಮ ದೇವಸ್ಥಾನದ ಒಳಗೆ ನೀರುನುಗ್ಗಿ ದೇವಸ್ಥಾನದ ಪರಿಕರಗಳು ನೀರಿಗಾಹುತಿಯಾಗಿದೆ. ಇದಲ್ಲದೇ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಹೊಳೆಯ ನೀರು ತುಂಬಿ ಗ್ರಾಮಗಳಿಗೆ ನುಗ್ಗಿದೆ. ಮಳೆ ಹೆಚ್ಚಾದ್ದರಿಂದ ಅಘನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು ಕುಮಟಾ, ಅಂಕೋಲ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ಒಂದು ದಿನಗಳ ಕಾಲ ಅಬ್ಬರದ ಮಳೆಸುರಿಯಲಿದ್ದು ಮೀನುಗಾರಿಕೆಯನ್ನು ಸ್ಥಗಿತ ಮಾಡಲಾಗಿದೆ. ಜಿಲ್ಲಾದ್ಯಾಂತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಕರಾವಳಿ ಜನರಿಗೆ ಆತಂಕ ತಂದೊಡ್ಡಿದೆ.