ಧಾರವಾಡ: ಮೊದಲೇ ಕೊರೊನಾದಿಂದ ಕಂಗೆಟ್ಟ ಧಾರವಾಡ ಜಿಲ್ಲೆಯಲ್ಲಿ ಮನಗುಂಡಿ ಹಾಗೂ ನಾಯಕನ ಹುಲಿಕೊಪ್ಪ ಗ್ರಾಮದ ರೈತರಿಗೆ ಈಗ ಕಳ್ಳರ ಕಾಟ ಬೇರೆ ಆರಂಭವಾಗಿದೆ.
ಈ ಗ್ರಾಮಗಳ ಸುತ್ತಮುತ್ತ ಇರುವ ಹೊಲಗಳಲ್ಲಿರುವ ನೀರು ಚಿಮ್ಮುವ ಸ್ಪ್ರಿಂಕ್ಲರ್ ಹಾಗೂ ತಾಮ್ರದ ತಂತಿಯನ್ನ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬೊರವೇಲ್ಗಳಿಗೆ ಅಳವಡಿಸಿದ ತಾಮ್ರದ ಕೇಬಲ್ ಸುಟ್ಟಿರುವ ಕಳ್ಳರು ಸುಮಾರು ಒಂದು ಲಕ್ಷ ಮೌಲ್ಯದ ತಾಮ್ರ ಕಳ್ಳತನ ಮಾಡಿದ್ದಾರೆ. ಅಲ್ಲದೇ 50 ಸಾವಿರ ಮೌಲ್ಯದ ಸ್ಪ್ರಿಂಕ್ಲರ್ಗಳನ್ನ ಕಳ್ಳತನ ಮಾಡಲಾಗಿದೆ.
ಈ ಹಿಂದೆ ಕೂಡ ಈ ಗ್ರಾಮಗಳ ಸರಹದ್ದಿನಲ್ಲಿರುವ ಮಹಾಮನೆ ಮಠದ ಹೊಲಗಳಿಗೆ ಕೂಡ ಕನ್ನ ಹಾಕಿರುವ ಕಳ್ಳರು, ಅಲ್ಲಿಯೂ ಇದೇ ರೀತಿಯಾಗಿ ಬೊರ್ವೆಲ್ ನ ತಾಮ್ರದ ತಂತಿಯನ್ನ ಕಳ್ಳತನ ಮಾಡಿದ್ದರು. ಇದು ಎರಡನೇ ಬಾರಿ ನಡೆದ ಕಳ್ಳತನವಾಗಿದೆ.
ಸದ್ಯ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.