– ಐಪಿಎಸ್ ಅಧಿಕಾರಿಯೇ ನನ್ನ ಸಾವಿಗೆ ಕಾರಣ
ಲಕ್ನೋ: ಐಪಿಎಸ್ ಅಧಿಕಾರಿ ಪ್ರಾಚಿ ಸಿಂಗ್ ವಿರುದ್ಧ ಪತ್ರ ಬರೆದು ಯುವಕನೋರ್ವ ಆತ್ಮಗತ್ಯೆಗೆ ಶರಣಾಗಿದ್ದಾರೆ. ಲಕ್ನೋ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಚಿ ಸಿಂಗ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆದ್ರೆ ಪೊಲೀಸ್ ಕಮಿಷನರ್ ಮೃತ ಯುವಕನ ಕುಟುಂಬಸ್ಥರ ಆರೋಪ ನಿರಾಧಾರ ಎಂದು ಹೇಳಿದ್ದಾರೆ.
ಚಂದಗಂಜ್ ನಿವಾಸಿಯಾಗಿದ್ದ ವಿಶಾಲ್ (26) ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆದ್ರೆ ವೇಶ್ಯಾವಾಟಿಕೆಯ ದಂಧೆಯಲ್ಲಿ ವಿಶಾಲ್ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಮಾರ್ಚ್ 21ರಂದು ಜಾಮೀನು ಪಡೆದು ವಿಶಾಲ್ ಹೊರ ಬಂದಿದ್ದರು. ಈ ಘಟನೆಯಿಂದಾಗಿ ವಿಶಾಲ್ ಮಾನಸಿಕವಾಗಿ ನೊಂದಿದ್ದರಿಂದ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಫೆಬ್ರವರಿ 13ರಂದು ವಿಶಾಲ್ ರಸ್ತೆ ಬದಿಯ ಅಂಗಡಿಯಲ್ಲಿ ತಿಂಡಿ ಮಾಡುತ್ತಿದ್ದನು. ಅಲ್ಲೇ ಪಕ್ಕದಲ್ಲಿದ್ದ ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಹಲವರನ್ನ ಬಂಧಿಸಿದ್ದರು. ಪಕ್ಕದಲ್ಲಿಯೇ ತಿಂಡಿ ಮಾಡುತ್ತಿದ್ದ ವಿಶಾಲ್ ನನ್ನು ಸಹ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. 20 ದಿನಗಳ ನಂತ್ರ ನ್ಯಾಯಾಲಯ ಜಾಮೀನು ನೀಡಿತ್ತು. ಆದ್ರೆ ಈ ಎಲ್ಲ ಬೆಳವಣಿಗೆಯಿಂದ ಮಗ ಅವಮಾನಿತನಾಗಿದ್ದನು ಎಂದು ವಿಶಾಲ್ ತಂದೆ ಅರ್ಜುನ್ ಹೇಳಿದ್ದಾರೆ.
ಬುಧವಾರ ಬೆಳಗ್ಗೆ 9 ಗಂಟೆಗೆ ವಿಶಾಲ್ ಕೆಲಸಕ್ಕೆ ಹೋಗುವದಾಗಿ ಹೇಳಿ ಮನೆಯಿಂದ ಹೊರ ಬಂದಿದ್ದಾನೆ. ಆದ್ರೆ ಕೆಲಸಕ್ಕೆ ಹೋಗದೇ ಬೆಳಗ್ಗೆ 11 ಗಂಟೆಗೆ ರೈದಾಸ್ ಕ್ರಾಸಿಂಗ್ ಬಳಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅರ್ಜುನ್ ಕಣ್ಣೀರು ಹಾಕುತ್ತಾರೆ.