– ಕಿಡಿಗೇಡಿಗಳಿಂದ ದುರ್ಬಳಕೆ ಆರೋಪ
– ಸಾಯಿದಿವ್ಯಾ ಖಾತೆ ಡಿಲೀಟ್
ಹೈದರಬಾದ್: ಮದನಪಲ್ಲಿ ಸಹೋದರಿಯರ ಹತ್ಯೆ ವಿಚಾರವಾಗಿ ಈಗ ಅವರು ಬಳಸುತ್ತಿದ್ದ ಸಾಮಾಜಿಕ ಜಾಲತಾಣ ಖಾತೆಯ ಬಗ್ಗೆ ಅನುಮಾನ ಎದ್ದಿದೆ. ಯಾರು ದುರುದ್ದೇಶ ಪೂರ್ವಕವಾಗಿ ಖಾತೆಗಳನ್ನು ಬಳಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹತ್ಯೆಯಾದ ಅಲೇಖ್ಯಾಳ ಸ್ನೇಹಿತ ಮೃಣಾಲ್ ಪ್ರೇಮ್ ಸ್ವರೂಪ್ ಶ್ರೀವಾಸ್ತವ್ ಈ ಆರೋಪ ಮಾಡಿದ್ದರಿಂದ ಪ್ರಕರಣಕ್ಕೆ ಮತ್ತಷ್ಟು ತಿರುವು ಪಡೆದುಕೊಂಡಿದೆ.
ಈ ಹಿಂದೆ ಅಲೇಖ್ಯಾಳ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪೋಸ್ಟ್ ಗಳಿಗೆ ಆಕೆಯ ಸಹೋದರಿ ಸಾಯಿ ದಿವ್ಯಾ ನೀಡುತ್ತಿದ್ದ ಲೈಕ್ಸ್ ಮತ್ತು ಕಮೆಂಟ್ಗಳನ್ನು ನೋಡಿದ್ದೇನೆ. ಆದರೆ ಈಗ ಈ ಕಮೆಂಟ್ಗಳು ಕಾಣುತ್ತಿಲ್ಲ. ಅಲೇಖ್ಯಾ ಜೊತೆ ಮೃತಪಟ್ಟ ಆಕೆಯ ಸಹೋದರಿ ಸಾಯಿ ದಿವ್ಯಾ ಫೇಸ್ ಬುಕ್ ಖಾತೆಯನ್ನು ಕೂಡ ಅಳಿಸಿದ್ದಾರೆ ಎಂದು ಶ್ರೀವಾಸ್ತವ್ ಹೇಳಿದ್ದಾನೆ.
ಸಾಯಿ ದಿವ್ಯಾ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಲೇಖ್ಯಾ ಫೋಟೋಗಳು ಹಾಗೆಯೇ ಇದೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಯಾರೋ ಸಾಯಿ ದಿವ್ಯಾಳನ್ನು ಆರೋಪಿಯನ್ನಾಗಿ ಬಿಂಬಿಸುವ ಸಲುವಾಗಿ ಈ ರೀತಿ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮೃತಪಟ್ಟ ಅಲೇಖ್ಯಾ ಸಾಮಾಜಿಕ ಜಾಲತಾಣದ ಖಾತೆಯನ್ನು ಯಾರೋ ಕಿಡಿಗೇಡಿಗಳು ಉಪಯೋಗಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾನೆ.
ಲಾಕ್ಡೌನ್ ಸಮಯದಲ್ಲಿ ಅಲೇಖ್ಯಾ ನನ್ನ ಜೊತೆ ಚಾಟ್ ಮಾಡುತ್ತಿದ್ದಳು. ಅಲೇಖ್ಯಾ ಸ್ವತಂತ್ರವಾಗಿ ಇರಲು ಯಾವಾಗಲೂ ಇಚ್ಛಿಸುತ್ತಿದ್ದಳು. ಕ್ಯಾಲಿಫೋರ್ನಿಯಾದಲ್ಲಿರುವ ಚೆಗ್ ಶಿಕ್ಷಣ ತಂತ್ರಜ್ಞಾನ ಕಂಪನಿಗೆ ಕಾರ್ಯನಿರ್ವಹಿಸುವುದಾಗಿ ಸಹಿ ಮಾಡಿದ್ದಳು ಹಾಗೂ ಪ್ರತಿ ನಿತ್ಯ ಮಕ್ಕಳಿಗೆ ಪಾಠ ಮಾಡುವ ಸಲುವಾಗಿ ಮುಂಜಾನೆ 3 ಗಂಟೆಯವರೆಗೂ ಎದ್ದಿರುತ್ತಿದ್ದಳು. ಅಲ್ಲದೆ ಅಲೇಖ್ಯಾ ನಾನು ದೆಹಲಿಯಲ್ಲಿ ವಾಸ್ತವ್ಯ ಹೂಡಲು ಇಚ್ಛಿಸುತ್ತೇನೆ ಮತ್ತು ದೇಶಾದ್ಯಂತ ಪ್ರವಾಸ ಮಾಡುವ ಆಸೆಯನ್ನು ತನ್ನೊಂದಿಗೆ ಹಂಚಿಕೊಂಡಿದ್ದಳು. ಆದರೆ ಒಮ್ಮೆ ಅಲೇಖ್ಯಾ ಕೊಲೆಯಾಗಿರುವ ಸುದ್ದಿ ಕೇಳಿ ನನಗೆ ಬಹಳ ಆಘಾತವಾಯಿತು ಎಂದು ಶ್ರೀವಾಸ್ತವ್ ಹೇಳಿದ್ದಾನೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಮದನಪಲ್ಲಿ ಡಿಎಸ್ಪಿ ರವಿ ಮನೋಹರ್ಚರಿ, ಈಗಾಗಲೇ ಪ್ರಕರಣ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಮೃತರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.