ಚೆನ್ನೈ: ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಶ್ವಾಸಕೋಶದ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿಲ್ಲ ಎಂದು ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆ ತಿಳಿಸಿದೆ.
ಕೋವಿಡ್ 19 ನಿಂದ ಎಸ್ಪಿಬಿ ಚೇತರಿಸಿಕೊಂಡ ಬಳಿಕ ಅವರಿಗೆ ಶ್ವಾಸಕೋಶದ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ವಂದತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಎಂಜಿಎಂ ಆಸ್ಪತ್ರೆ ಸ್ಪಷ್ಟನೆ ನೀಡಿದೆ.
ಕೊರೊನಾದಿಂದ ಚೇತರಿಕೆ ಕಂಡರೂ ಅವರಿಗೆ ಶ್ವಾಸಕೋಶದ ಸಮಸ್ಯೆಯಿದೆ. ಹೀಗಾಗಿ ಶೀಘ್ರವೇ ವೈದ್ಯರು ಶ್ವಾಸಕೋಶದ ಕಸಿ ಚಿಕಿತ್ಸೆ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದು ಆಸ್ಪತ್ರೆಯನ್ನು ಸಂಪರ್ಕಿಸಿದೆ. ಈ ವೇಳೆ ಶ್ವಾಸಕೋಶದ ಕಸಿ ಮಾಡುವುದಿಲ್ಲ. ಇದೊಂದು ಸುಳ್ಳು ವದಂತಿ ಎಂದು ಹೇಳಿದ್ದಾರೆ. ಶೀಘ್ರವೇ ವೈದ್ಯರು ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿರುವ ವೆಂಟಿಲೇಟರ್ ಅನ್ನು ತೆಗೆಯುವ ಸಾಧ್ಯತೆಯಿದೆ.
ಭಾನುವಾರ ಪುತ್ರ ಚರಣ್ ತಮ್ಮ ವಿಡಿಯೋದಲ್ಲಿ, ತಂದೆಯ ಆರೋಗ್ಯ ಸುಧಾರಣೆಯಾಗುತ್ತಿದೆ. ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಸ್ಪತ್ರೆಯಲ್ಲಿ ಆಚರಿಸಿದ್ದಾರೆ. ಈಗ ಆಸ್ಪತ್ರೆಯಲ್ಲೇ ಎಸ್ಪಿಬಿ ಟೆನಿಸ್ ಮತ್ತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಎಂದು ತಿಳಿಸಿದ್ದರು. ಇದನ್ನೂ ಓದಿ: ತಂದೆ ಸಂಗೀತ ಕೇಳ್ತಾ, ತಾಳಕ್ಕೆ ತಕ್ಕಂತೆ ಕೈಯಾಡಿಸ್ತಿದ್ದಾರೆ: ಎಸ್ಪಿಬಿ ಪುತ್ರ
ಇಷ್ಟು ದಿನ ಅಪ್ಡೇಟ್ ನೀಡದ್ದಕ್ಕೆ ದಯವಿಟ್ಟು ಕ್ಷಮಿಸಿ, ವೀಕೆಂಡ್ ಬಳಿಕ ನಮಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಅವರ ಲಂಗ್ಸ್ನಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚಿನ ಸುಧಾರಣೆಯಾಗಬೇಕಿರುವುದರಿಂದ ವೆಂಟಿಲೇಟರ್ನಲ್ಲಿಯೇ ಇಡಲಾಗಿದೆ. ಖುಷಿಯ ವಿಚಾರ ಎಂಬಂತೆ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಆದರೆ ಕೋವಿಡ್ ವರದಿ ನೆಗೆಟಿವ್ ಪಾಸಿಟಿವ್ ಏನೇ ಇರಲಿ ನಮಗೀಗ ಶ್ವಾಸಕೋಶಗಳು ಬೇಗನೇ ಗುಣಮುಖವಾಗಬೇಕಿದೆ ಎಂದು ಹೇಳಿದ್ದರು.
ಕಳೆದ ಆಗಸ್ಟ್ 5ರಂದು ಎಸ್ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಆಗಸ್ಟ್ 24ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.