ಉಡುಪಿ: ಅಯೋಧ್ಯೆ ಭಗವಾನ್ ಶ್ರೀ ರಾಮ ದೇವರ ಭವ್ಯ ಮಂದಿರದ ನಿರ್ಮಾಣ ಕಾರ್ಯವನ್ನು ಎಲ್ ಆ್ಯಂಡ್ ಟಿ ಮತ್ತು ಟಾಟಾ ಸಂಸ್ಥೆಗೆ ಒಪ್ಪಿಸಿರುವುದಾಗಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉತ್ತರ ಭಾರತದ ಪ್ರವಾಸದಲ್ಲಿರುವ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಅಯೋಧ್ಯಗೆ ಭೇಟಿ ನೀಡಿದ್ದಾರೆ. ಸಂತ ಸಮಾವೇಶದಲ್ಲಿ ಭಾಗಿಯಾದ ವಿಶ್ವಪ್ರಸನ್ನ ತೀರ್ಥರು, ರಾಮಮಂದಿರ ನಿರ್ಮಾಣದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿ ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ. ಕಾಮಗಾರಿಯ ಮೇಲುಸ್ತುವಾರಿಯನ್ನು ಟಾಟಾ ಕಂಪನಿ ಗೆ ನೀಡಲಾಗಿದೆ.
ಈ ಎರಡು ಜವಾಬ್ದಾರಿಯನ್ನು ಎರಡು ಕಂಪನಿಗಳು ಒಪ್ಪಿಕೊಂಡಿದೆ. ರಾಮಮಂದಿರದ ಕಾರ್ಯದರ್ಶಿ ಚಂಪತ್ ರಾಯ್ ಟ್ರಸ್ಟ್ ಕಡೆಯಿಂದ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.
ಪೇಜಾವರ ಮಠದ ಶಾಖಾ ಮಠವಾದ ಮಧ್ವಾಶ್ರಮ ಪ್ರಮೋದ ವನದಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರಾಯ್, ವಿಶ್ವಸ್ಥರಾದ ಡಾ. ಅನಿಲ್ ಮಿಶ್ರಾ, ದಿನೇಶ್ಚಂದ್ರ, ನಿವೃತ್ತ ಮುಖ್ಯ ಇಂಜಿನಿಯರ್ ಜಗದೀಶ್ ಅವರು ಟ್ರಸ್ಟ್ನ ಅನೌಪಚಾರಿಕ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ತಿಳಿಸಿ, ಇಂದು ನಡೆಯುವ ಔಪಚಾರಿಕ ಸಭೆಗೆ ಆಹ್ವಾನ ನೀಡಿದರು.