ಧಾರವಾಡ: ನಮ್ಮ ರಾಜ್ಯಕ್ಕೆ ಕೇಳಿದಷ್ಟು ವೆಂಟಿಲೇಟರ್ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬ ಮಾಜಿ ಸಚಿವ ಎಚ್ ಕೆ ಪಾಟೀಲ್ ಆರೋಪಕ್ಕೆ ಸಚಿವ ಜಗದೀಶ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್.ಕೆ.ಪಾಟೀಲ್ ಮುಂಜಾನೆಯಿಂದ ಸಂಜೆವರೆಗೂ ಆರೋಪ ಮಾಡ್ತಾನೆ ಇರುತ್ತಾರೆ. ಕೇಂದ್ರ ನಮಗೆ ಕೊಟ್ಟಿರುವಷ್ಟು ವೆಂಟಿಲೇಟರ್ ಸಹ ಇನ್ನು ನಾವು ಉಪಯೋಗ ಮಾಡಿಲ್ಲ. ಈಗಿರುವುದಕ್ಕೆ ಏನು ವ್ಯವಸ್ಥೆ ಬೇಕು ಅದನ್ನು ಮಾಡುತ್ತಿದ್ದೇವೆ. ಕೊರೊನಾ ಕಾರಣ ಆರ್ಥಿಕ ಮುಗ್ಗಟ್ಟು ಶುರುವಾಗಿದೆ ಎಂದರು.
ಸರ್ಕಾರದ ಆದಾಯಕ್ಕೂ ಮುಗ್ಗಟ್ಟು ಎದುರಾಗಿದ್ದು, ಹೀಗಾಗಿ ಸಿಆರ್ಎಫ್ ಅನುದಾನಗಳು ಬಿಡುಗಡೆಯಾಗಿಲ್ಲ. ಹಿಂದಿನ ಸರ್ಕಾರ ಆರು ತಿಂಗಳು ಬಾಕಿ ಉಳಿಸಿತ್ತು. ಈಗ ಅದರ ಬಗ್ಗೆ ನಾವು ಚಿಂತನೆ ನಡೆಸಿದಾಗಲೇ ಕೊರೊನಾ ಬಂದಿದೆ ಎಂದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತಿಭಟನೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ಹೊಸದಾಗಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಏನಾದರೂ ಮಾಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಸೆಸ್ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಹೆಚ್ಚಾಗಿದ್ದು, ಇವರು ಆಗ ಯಾಕೆ ಇಳಿಸಲಿಲ್ಲ ಎಂದು ಪ್ರಶ್ನಿಸಿದರು.