– ಯುಗಾದಿಗೆ ಉತ್ತರ ಕರ್ನಾಟಕದವರೇ ಸಿಎಂ
– ರಾಜ್ಯದಲ್ಲಿ ನಾವೇ ಮಂತ್ರಿಗಿರಿ ನೀಡುವ ಯೋಗ ಬರಲಿದೆ
ಚಿತ್ರದುರ್ಗ: ಊಟ ಮತ್ತು ತಿಂಡಿಗೆ ನಮ್ಮ ಬೇಡಿಕೆಗಳು ಈಡೇರಲ್ಲ ಎಂದು ಸಿಎಂ ಕರೆದ ಔತಣಕೂಟಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದರು. ಮಂಗಳವಾರ ರಾತ್ರಿ ಕರೆದ ಔತಣಕೂಟಕ್ಕೆ ಯತ್ನಾಳ್ ಗೈರಾಗಿದ್ದು, ಚಿತ್ರದುರ್ಗದಲ್ಲಿ ನಡೆದ ಪಂಚಮಸಾಲಿ ಪಾದಾಯಾತ್ರೆ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಸಮಾವೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತ್ನಾಳ್, ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡುವ ಯೋಗ ಬರಲಿದೆ. ನಾನು ಏನೆಂಬುದು ದೆಹಲಿ ಹೈಕಮಾಂಡ್ ಗೆ ಗೊತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿದೆ. ಪಂಚಮಸಾಲಿ ಶ್ರೀಗಳು ಬಿಸಿಲಲ್ಲಿ ಪಾದಯಾತ್ರೆ ಹೊರಟರೂ ಸಿಎಂ ಮಾತಾಡಿಲ್ಲ. ಈ ಬಗ್ಗೆ ನಾವು ಸದನದಲ್ಲಿ ಪ್ರಸ್ತಾಪಿಸಿದ ಬಳಿಕ ಸಭೆ ಕರೆದರು ಎಂದು ಹೇಳಿದರು.
ಈವತ್ತು ಸದನದ ಬಾವಿಗೆ ಇಳಿದು ನಾವು 2ಎ ಮೀಸಲಾತಿಗಾಗಿ ಧರಣಿ ಮಾಡಿದೇವು. ಸಿಎಂ ಊಟ, ನಾಷ್ಟಾ ಮಾಡಿಸುವುದರಿಂದ ನಮ್ಮ ಬೇಡಿಕೆ ಈಡೇರಲ್ಲ. ನಾವು ಶಾಸಕರು, ಸಂಸದರು ಹೇಗೆ ಆಗಬೇಕೆಂದು ನಮಗೆ ಗೊತ್ತಿದೆ. ನಮ್ಮನ್ನು ಹೊರಗೆ ಹಾಕಿದ್ರೂ ಆಗ್ತೀವಿ, ಪಕ್ಷದೊಳಗಿದ್ದರು ಗೆಲ್ತೀವಿ. ಪಕ್ಷೇತರವಾಗಿ ವಿಧಾನ ಪರಿಷತ್ ಗೆ ಗೆದ್ದು ಬಂದಿದ್ದೇನೆ. ಶಾಸಕರ ಮನೆ ಬಳಿ ಪಂಚಮಸಾಲಿ ಸಮುದಾಯದ ಜನ ಧರಣಿ ಮಾಡಿ ಸಮಾಜದ ಶಕ್ತಿ ತೋರಿಸಬೇಕಿದೆ ಎಂದು ಹೇಳಿದರು.
ನಾವು ಯಾಕೆ ಆಗಬಾರದು?: ದೇಶದಲ್ಲಿ ಹುಟ್ಟಿರುವ ಎಲ್ಲರಿಗೂ ಸಿಎಂ, ಪಿಎಂ ಆಗುವ ಅರ್ಹತೆ ಇದೆ. ಅಂತೆಯೇ ನಮಗೂ ಯಾಕೆ ಆ ಅದೃಷ್ಟ ಇರಬಾರದು. ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಯುಗಾದಿ ಒಳಗೆ ಉತ್ತರ ಕರ್ನಾಟಕದವರು ಸಿಎಂ ಆಗ್ತಾರೆ. ಆದ್ರೆ ಬಿಎಸ್ವೈ ಸಂಪುಟದಲ್ಲಿ ನಾನು ಮಂತ್ರಿ ಆಗಲ್ಲ. ಕೆಲವರು ಮಠಾಧೀಶರಿಂದ ಲಾಬಿ ಮಾಡಿಸಿ, ದಕ್ಷಿಣೆ ಕೊಟ್ಟು ಮಂತ್ರಿ ಆಗಿದ್ದಾರೆ. ಆದ್ರೆ ನಾನು ಅಂತಹ ರಾಜಕಾರಣಿ ಅಲ್ಲ ಎಂದರು.
ಯುಗಾದಿ ಬಳಿಕ ಎರಡನೇ ಹಂತದ ಯುಗ ಮತ್ತು ನಾಯಕತ್ವ ಪ್ರಾರಂಭವಾಗಲಿದೆ. ಪ್ರಾಮಾಣಿಕ, ಹಿಂದುತ್ವದ ಪರ ಇರುವ ರಾಜಕಾರಣಿ ಈ ರಾಜ್ಯಕ್ಕೆ ಅಗತ್ಯವಿದೆ. ಎಲ್ಲಾ ವರ್ಗದ ವಿಶ್ವಾಸ ಪಡೆದು ಸಿಎಂ ಆಗುವ ಕಾಲ ಸಮೀಪಿಸುತ್ತಿದೆ. ಉತ್ತರ ಕರ್ನಾಟಕದಿಂದ ಅಂತಹ ರಾಜಕಾರಣಿ ಬರ್ತಾರೆ ಎಂದು ಸಿಎಂ ಬದಲಾವಣೆಯ ಮಾತನ್ನ ಪುನರುಚ್ಛಿಸಿದರು.