ಬಳ್ಳಾರಿ: ಕೊಟ್ಟೂರು ತಾಲೂಕಿನ ಬಸವೇಶ್ವರ ಬಡಾವಣೆಯ ಉದ್ಯಮಿ ಮಲ್ಲೇಶಪ್ಪ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಒಟ್ಟು ಐದು ಜನರನ್ನು ಪೊಲೀಸರು ಬಂಧನಮಾಡಿದ್ದಾರೆ.
ಉದ್ಯಮಿ ಮಲ್ಲೇಶ್ ಅವರ ಮನೆಯಲ್ಲಿ ಏ.11ರಂದು ಹತ್ತು ಜನರ ತಂಡ ರಾತ್ರಿ ಏಕಾಏಕಿ ನುಗ್ಗಿ ಮನೆಯಲ್ಲಿ ಇದ್ದ ಗಂಡ ಹೆಂಡತಿಯನ್ನು ಹೆದರಿಸಿ ಮನೆಯಲ್ಲಿದ್ದ 30 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದ್ದ ಜಿ.ಎಸ್.ಜೀವನ್ ಪತ್ತೆಗಾಗಿ ನಿರಂತರ ಹುಡುಕಾಟ ನಡೆಸಿದ್ದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಥಳೀಯರು ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಯೂಟ್ಯೂಬ್ನಿಂದ ಸರಗಳ್ಳತನ ಕಲಿತ- ಕೋಟೆನಾಡಲ್ಲಿನ ಖತರ್ನಾಕ್ ಗ್ಯಾಂಗ್ ಅಂದರ್
ಪ್ರಕರಣದಲ್ಲಿ ಭಾಗಿಯಾದ ಭದ್ರಾವತಿಯ ಜಿ.ಎಸ್.ಜೀವನ್, ಬಡಲಡುಕು ಗ್ರಾಮದ ಪಿ.ಶ್ರೀನಿವಾಸ, ಚಪ್ಪರದಹಳ್ಳಿಯ ಕೆ.ಬಸವರಾಜ, ಕೊಟ್ಟೂರಿನ ಯಲ್ಲೋಜಿರಾವ್, ಹಾಗೂ ರಾಂಪುರ ಗ್ರಾಮದ ಎ.ರಾಮಚಂದ್ರಪ್ಪ ಆರೋಪಿಗಳನ್ನು ಹಿಡಿಯುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದರೋಡೆಯಾದ 30 ಲಕ್ಷ ರೂ.ಗಳ ಪೈಕಿ ಆರೋಪಿಗಳಿಂದ ಒಟ್ಟು 12.47 ಲಕ್ಷ ರೂ.ನಗದು, ಇನೋವಾ, ಓಮಿನಿ, ಇಂಡಿಕಾ ಕಾರನ್ನು ವಶಕ್ಕೆ ಪಡೆಯಲಾಗಿದೆ.