ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ದಿನ ಅಲ್ಪ ಬಿಡುವು ಕೊಟ್ಟಿದ್ದ ಮಳೆ, ಮಧ್ಯಾಹ್ನದ ನಂತರ ತನ್ನ ವೇಗವನ್ನು ಮುಂದುವರಿಸಿದ್ದು, ಅಬ್ಬರಿಸಿ ಬೊಬ್ಬಿರಿಯುತ್ತಿದೆ.
ಜಿಲ್ಲೆಯಾದ್ಯಂತ ಹೆಚ್ಚಿನ ಮಳೆಯಾಗುತಿದ್ದು, ಕದ್ರಾ ಮತ್ತು ಕೊಡಸಳ್ಳಿ ಡ್ಯಾಮ್ ನಿಂದ ಬುಧವಾರ ನೀರನ್ನು ಬಿಡುಗಡೆ ಮಾಡಲಾಗಿದೆ. ಕದ್ರಾ ಜಲಾಶಯದಲ್ಲಿ ಎಂಟು ಗೇಟ್ ತೆರೆದು ಒಟ್ಟು 22,143 ಕ್ಯೂಸೆಕ್ಸ್ ನೀರು ಹಾಗೂ ಕೊಡಸಳ್ಳಿ ಡ್ಯಾಮ್ ನಿಂದ ನಾಲ್ಕು ಗೇಟ್ ತೆರೆದು 22,393 ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗಿದೆ.
ಹೊನ್ನಾವರ ತಾಲೂಕಿನ ಚಿತ್ತಾರ ಅರಣ್ಯ ಭಾಗದಲ್ಲಿ ಮಳೆಯಿಂದ ಬೃಹದಾಕಾರದ ಮರ ರಸ್ತೆಗೆ ಉರುಳಿ ಹಲವು ಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು. ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಅಬ್ಬರದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.