– 2000 ಎಕ್ರೆ ಬೇಸಾಯ ನಾಟಿಗೆ ಚಾಲನೆ
ಉಡುಪಿ: ಕೃಷಿ ಚಟುವಟಿಕೆಯನ್ನು ಗಮನಿಸಿ ನೂತನ ಬೇಸಾಯ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಸಂಚರಿಸುತ್ತಿದ್ದ ಕಾರು ಜಿಲ್ಲೆಯ ಕಡೆಕಾರು ಎಂಬಲ್ಲಿ ಕೆಸರಿನಲ್ಲಿ ಹೂತು ಹೋಗಿದೆ. ಭಾರೀ ಮಳೆಗೆ ತೇವಗೊಂಡಿದ್ದ ಗದ್ದೆಗೆ ಕಾರು ಇಳಿಸಿದ್ದೇ ಈ ಪಜೀತಿಗೆ ಕಾರಣವಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಬೇಸಾಯ ಅಭಿಯಾನ ಆರಂಭಗೊಂಡಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಬೀಳುಬಿಟ್ಟ 2000 ಎಕರೆ ಗದ್ದೆಯನ್ನು ಬೇಸಾಯ ಮಾಡಲಾಗುತ್ತಿದೆ. ಈ ಪುನಶ್ಚೇತನ ಕಾರ್ಯಕ್ರಮದ ನಾಟಿ ಕಾರ್ಯಕ್ಕೆ ಕೃಷಿ ಸಚಿವರು ಆಗಮಿಸಿದ್ದರು. ಈ ಸಂದರ್ಭ ಕೆಸರಿನಲ್ಲಿ ಸಚಿವರ ಕಾರು ಹೂತಿದೆ. ಉಡುಪಿಯ ಕಡೆಕಾರು ಎಂಬಲ್ಲಿ ಘಟನೆ ನಡೆದಿದ್ದು, ಕಾರು ಮೇಲೆತ್ತಲು ಬಿಜೆಪಿ ನಾಯಕರು, ಸ್ಥಳೀಯ ಜನ ಪ್ರತಿನಿಧಿಗಳು ಕೆಲಕಾಲ ಪರದಾಟ ಮಾಡಿದರು. ನಂತರ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯುವಕರು ಓಡೋಡಿ ಬಂದು ಸಚಿವರ ಕಾರನ್ನು ತಳ್ಳಿ ಮೇಲೆ ಎತ್ತಿದರು. ಇದನ್ನೂ ಓದಿ: ಆನ್ಲೈನ್ ಕ್ಲಾಸ್ಗಾಗಿ 2 ಕಿ.ಮೀ ದೂರದಲ್ಲಿ ತಾವೇ ಕ್ಲಾಸ್ ರೂಂ ರೆಡಿ ಮಾಡಿದ ವಿದ್ಯಾರ್ಥಿಗಳು
ಉಡುಪಿ ನಗರದಾದ್ಯಂತ ಮುಂಜಾನೆಯಿಂದ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಗೆ ಸುತ್ತಮುತ್ತಲ ಗದ್ದೆಗಳು ತೇವಗೊಂಡಿದ್ದು, ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಜಿಲ್ಲೆಯಾದ್ಯಂತ ಮೋಡ ಮುಸುಕಿದೆ.