– ಹೈಕಮಾಂಡ್ ಮೇಲೆ ಒತ್ತಡಕ್ಕೆ ಸಹಿ ಸಂಗ್ರಹ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ಸಿಡಿಸಿದ ಲೆಟರ್ ಬಾಂಬ್ಗೆ ರಾಜ್ಯ ಬಿಜೆಪಿ ತತ್ತರಿಸಿಹೋಗಿದೆ. ಈಗಿರುವ ಸಮಸ್ಯೆಗಳನ್ನು ನಿಭಾಯಿಸುವುದರಲ್ಲೇ ಸುಸ್ತಾಗಿ ಹೋಗಿರುವ ಸಿಎಂ ಯಡಿಯೂರಪ್ಪ, ಈಶ್ವರಪ್ಪ ಪತ್ರಕ್ಕೆ ಫುಲ್ ಗರಂ ಆಗಿದ್ದಾರೆ.
ಈಗಾಗಲೇ ಕಾಂಗ್ರೆಸ್ನವರು ನಮ್ಮ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದು ಎಷ್ಟು ಸರಿ..? ಅಂತ ಆಪ್ತರ ಬಳಿ ಸಿಡಿಮಿಡಿಗೊಂಡಿದ್ದಾರೆ. ಈಶ್ವರಪ್ಪ ಯಾರನ್ನೂ ಕೇಳದೇ ರಾಜ್ಯಪಾಲರ ಹತ್ರ ಹೋಗಿರುವಾಗ, ನಾನು ಯಾರನ್ನೂ ಕೇಳದೆ ಅವರ ಖಾತೆ ಚೇಂಜ್ ಮಾಡ್ತೀನಿ.. ಏನ್ ಆಗ್ಬಿಡುತ್ತೆ ನೋಡ್ತೀನಿ.. ಆಗ ಹೈಕಮಾಂಡ್ ಮುಂದೆ ಹೋಗ್ಲಿ ಎಂದು ಕೂಗಾಡಿದ್ದಾರೆ. ಆಗ ಆಪ್ತರು ಸಿಎಂ ಅವರನ್ನ ಸಮಾಧಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬೆನ್ನಲ್ಲೇ ಆಪ್ತ ಸಚಿವರು ಸಿಎಂ ಭೇಟಿ ಮಾಡಿ ಸಭೆ ನಡೆಸಿದ್ದಾರೆ. ಆಪ್ತ ಶಾಸಕರು ಯಡಿಯೂರಪ್ಪರನ್ನು ಭೇಟಿ ಮಾಡಿ ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿದ್ದಾರೆ. ಇದುವರೆಗೂ 48 ಶಾಸಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಈಶ್ವರಪ್ಪರನ್ನು ಸಂಪುಟದಿಂದ ತೆಗೆಯುವಂತೆ ಹೈಕಮಾಂಡ್ಗೆ ಪತ್ರ ಬರೆಯಲು ಸಜ್ಜಾಗಿದ್ದಾರೆ.
ಇಂದು ಸಾಲು ಸಾಲು ಸುದ್ದಿಗೋಷ್ಠಿ ನಡೆಸಿದ ಬಿಎಸ್ ಯಡಿಯೂರಪ್ಪ ಆಪ್ತರು, ಸಚಿವ ಈಶ್ವರಪ್ಪ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪವನ್ನು ಸಮರ್ಥನೆ ಮಾಡಿಕೊಂಡ್ರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ, ಈಶ್ವರಪ್ಪ ಕ್ರಮವನ್ನು ಟೀಕಿಸಿದ್ರು. ಜಗದೀಶ್ ಶೆಟ್ಟರ್ ಮಾತ್ರ ಇದನ್ನು ಸಿಎಂ ವಿರುದ್ಧ ಅಂತಾ ಹೇಳಲ್ಲ ಅಂದ್ರು. ಇನ್ನು ರಾಜ್ಯಪಾಲರಿಗೆ ಪತ್ರ ಬರೆದಿರುವುದರಲ್ಲಿ ವಿಶೇಷ ಏನಿಲ್ಲ ಅಂತಾ ಈಶ್ವರಪ್ಪ ಜಾರಿಕೊಂಡಿದ್ದಾರೆ.