ಮಡಿಕೇರಿ: ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಎರಡು ವರ್ಷವಾದರೂ ಸರ್ಕಾರ ನಿವೇಶನ ವಿತರಣೆ ಮಾಡದಿರುವುದನ್ನು ಖಂಡಿಸಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸಂತ್ರಸ್ತರು ಪ್ರತಿಭಟನೆ ನಡೆಸಿದರು.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಕುಂಬಾರಗುಂಡಿ ಸೇರಿದಂತೆ ವಿವಿಧ ಗ್ರಾಮಗಳ 200ಕ್ಕೂ ಹೆಚ್ಚು ಕುಟುಂಬಗಳ ನೂರಾರು ಜನರು ಕೊಡಗು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ವರ್ಷದ ಹಿಂದೆ ನಿವೇಶನಕ್ಕಾಗಿ ಜಾಗಗಳನ್ನು ಗುರುತಿಸಿದ್ದರು. ಆದರೆ ಇದೀಗ ಅಲ್ಲಿಗೆ ಬೇಕಾಗಿರುವ ಮೂಲಸೌಲಭ್ಯ ಒದಗಿಸದೆ ಸಂತ್ರಸ್ತರು ಇನ್ನೂ ಅಂತಂತ್ರ ಸ್ಥಿತಿಯಲ್ಲಿ ಇರುವಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮೂರು ತಿಂಗಳಲ್ಲಿ ಮಳೆ ಆರಂಭವಾಗಲಿದೆ. ಮಳೆ ಆರಂಭವಾಯಿತೆಂದರೆ ನಾವು ನೆಲೆ ಕಂಡುಕೊಳ್ಳುವುದಾದರೂ ಎಲ್ಲಿ ಅನ್ನೋ ಆತಂಕ ಶುರುವಾಗಿದೆ. ನಿವೇಶನಕ್ಕಾಗಿ ಈಗಾಗಲೇ ಜಾಗವನ್ನು ಗುರುತಿಸಿ ವರ್ಷವಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಆ ಸ್ಥಳಕ್ಕೆ ಬೇಕಾಗಿರುವ ಸೌಲಭ್ಯ ಒದಗಿಸಿಲ್ಲ. ನಿವೇಶನ ಇಲ್ಲದೇ ಇರುವುದರಿಂದ ಎರಡು ವರ್ಷಗಳ ಹಿಂದೆ ಸಿಗಬೇಕಾಗಿದ್ದ ಪರಿಹಾರದ ಹಣ ಕೂಡ ಇನ್ನೂ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.