ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಧಾರಾವಾಹಿ ಚಿತ್ರೀಕರಣಗಳು ಇಂದಿನಿಂದ ಪುನರಾರಂಭವಾಗುತ್ತಿವೆ. ಈ ಮೂಲಕ ಕೊರೊನಾ ಸಂಕಷ್ಟದಿಂದ ನಲುಗಿದ್ದ ಕನ್ನಡ ಕಿರುತೆರೆಯಲ್ಲಿ ಆಶಾಕಿರಣವೊಂದು ಮೂಡಿದೆ.
ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 19 ರಿಂದ ಧಾರಾವಾಹಿ, ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಅಂದಾಜು 120 ಧಾರಾವಾಹಿಗಳು ಚಿತ್ರೀಕರಣವನ್ನು ನಿಲ್ಲಿಸಿದ್ದವು. ಆದರೆ ಅನೇಕ ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ಮಾಡುವಂತೆ ಸೂಚನೆ ನೀಡಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಲು ಧಾರಾವಾಹಿಗಳು ಮುಂದಾಗಿದೆ. ಜೊತೆಗೆ ಶೂಟಿಂಗ್ ಲೋಕೇಷನ್ಗಳಲ್ಲಿ 20ಕ್ಕಿಂತ ಅಧಿಕ ತಂತ್ರಜ್ಞರು, ಕಲಾವಿದರು ಸೇರದಂತೆ ಎಚ್ಚರಿಕೆ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಅಲ್ಲದೇ ಪ್ರತಿ ಎರಡು ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ಸೂಚಿಸಿದೆ.
ಅಷ್ಟೇ ಅಲ್ಲದೇ ಮೇಕಪ್ ವಸ್ತುಗಳನ್ನ ಕಲಾವಿದರೇ ತರುವಂತೆ ಹೊಸ ರೂಲ್ಸ್ ಮಾಡಲಾಗಿದೆ. ಚಿತ್ರೀಕರಣದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಇನ್ಸೂರೆನ್ಸ್ ಮಾಡಲು ಕೂಡ ಪ್ಲಾನ್ ಮಾಡಲಾಗಿದೆ. ಹೀಗಾಗಿ ಕಲಾವಿದರ ಸಂಭಾವನೆಯಲ್ಲಿ ಇದರ ಮೊತ್ತ ಕಡಿತಮಾಡಲಾಗುತ್ತೆ. ಇಂದಿನಿಂದ ಧಾರಾವಾಹಿ ಶೂಟಿಂಗ್ ಆರಂಭವಾಗಿದ್ದು, ಜೂನ್ 1ರಿಂದ ವಿವಿಧ ಧಾರಾವಾಹಿಗಳ ಹೊಸ ಎಪಿಸೋಡ್ ಗಳು ಟೆಲಿಕಾಸ್ಟ್ ಆಗಲಿವೆ.